ಕಾರವಾರ: ಹೊನ್ನಾವರ ತಾಲ್ಲೂಕಿನ ಕಡ್ಲೆ ಗ್ರಾಮದ ಬರಗದ್ದೆಯ ಹಾಡಿ ಜಾಗದಲ್ಲಿ ಹೆಣ್ಣು ಚಿರತೆಯೊಂದರ ಕಳೇಬರ ಮಂಗಳವಾರ ಸಂಜೆ ಪತ್ತೆಯಾಗಿದೆ.
ಚಿರತೆಗೆ ಎರಡು ಅಥವಾ ಮೂರು ವರ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಸಹಜ ಸಾವು ಎಂದು ಪಶುವೈದ್ಯರು ತಿಳಿಸಿದ್ದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಕಳೆದ ಶನಿವಾರ ಗ್ರಾಮದ ಗೇರು ನೆಡುತೋಪಿನಲ್ಲಿ ನಡೆದುಕೊಂಡು ಬರುತ್ತಿದ್ದ ಗ್ರಾಮಸ್ಥ ವೆಂಕಟರಮಣ ಹೆಗಡೆ ಅವರ ಮೇಲೆ ಚಿರತೆಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಆ ಜಾಗದಿಂದ ಸುಮಾರು 200 ಮೀಟರ್ ದೂರದಲ್ಲಿ ಚಿರತೆಯ ಕಳೇಬರ ಕಂಡುಬಂದಿದೆ. ಇದು ಅದರದ್ದೇ ಮೃತದೇಹ ಎನ್ನುವುದು ಖಚಿತವಾಗಿಲ್ಲ.
ಕಳೇಬರವನ್ನು ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟುಹಾಕಲಾಯಿತು.