ಒಣಗಿದ ಬಿದಿರು ಹಿಂಡುಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಕೆಲ ಕಡೆಗಳಲ್ಲಿ ಮಾತ್ರ, ರಸ್ತೆಗೆ ಬಂದಿದ್ದ ಹಿಂಡನ್ನು ಬದಿಗೆ ಸರಿಸಿ, ಕೈತೊಳೆದುಕೊಂಡಿರುವ ಇಲಾಖೆ, ಉಳಿದವನ್ನು ಹಾಗೆಯೇ ಬಿಟ್ಟಿದೆ. ಬಿದಿರು ಕಟ್ಟೆಬಂದ ನಂತರ ಚಿಗುರುವುದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಕಟ್ಟೆ ಬಂದ ಕೂಡಲೇ ಹರಾಜು ಮಾಡಿ ಮಳೆಗಾಲದೊಳಗೆ ವಿಲೇವಾರಿ ಮಾಡಿದ್ದಿದ್ದರೆ, ಬೆಂಕಿ ಭಯ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತಿತ್ತು. ಆದರೆ, ಅರಣ್ಯ ಇಲಾಖೆಗೆ ಇದಾವುದೂ ಕಣ್ಣಿಗೆ ಕಾಣತ್ತಿಲ್ಲ. ವಿದ್ಯುತ್ ಅವಘಡ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದರೆ ಮುಂದಿನ ಅನಾಹುತ ಊಹಿಸಲು ಅಸಾಧ್ಯ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು, ವ್ಯಾಪಕ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.