ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ನಿವಾಸಿ ಡೀಕಯ್ಯ ಗೌಡರ ತೋಟಕ್ಕೆ ಗುರುವಾರ ರಾತ್ರಿ ಕಾಡಿನಿಂದ ಬಂದ ಆನೆಗಳ ಹಿಂಡು ಕೃಷಿಗೆ ಹಾನಿ ಮಾಡಿವೆ.
ಆನೆಗಳು ಆಹಾರ ಹುಡುಕಿಕೊಂಡು ತೋಟಕ್ಕೆ ಬಂದಿದ್ದು, ಅವು ಮರಳಿ ಕಾಡಿಗೆ ಹೋಗುವಾಗ ಮರಿಯಾನೆ ಒಂದು ತೋಟದಲ್ಲಿ ಉಳಿದಿದೆ. ತೋಟದ ಮಾಲಕ ಶುಕ್ರವಾರ ಬೆಳಿಗ್ಗೆ ತೋಟಕ್ಕೆ ಹೋದಾಗ ವಿಷಯ ಗೊತ್ತಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಎರಡು ತಿಂಗಳು ಪ್ರಾಯದ ಸಣ್ಣ ಮರಿಯಾಗಿರುವುದರಿಂದ ಮತ್ತೆ ಆನೆಗಳ ಹಿಂಡು ಬಂದು ಜೊತೆಯಲ್ಲಿ ಮರಿಯನ್ನು ಕಾಡಿಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.