ಶಿರಸಿ: ದ್ವೈವಾರ್ಷಿಕ ಮಾರಿಕಾಂಬಾ ಜಾತ್ರೆ ಸುಗಮವಾಗಿ ನಡೆಯಲು ₹2.54 ಕೋಟಿ ವೆಚ್ಚದಲ್ಲಿ ನಗರಸಭೆಯಿಂದ ಹಲವು ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಾತ್ರೆ ವೇಳೆ ನಗರಕ್ಕೆ ಬೇಕಿರುವ ಮೂಲಸೌಕರ್ಯಗಳ ಅಭಿವೃದ್ಧಿ, ಸಿದ್ಧತೆ ಸಲುವಾಗಿ ಮೂರು ಬಾರಿ ಪೂರ್ವಭಾವಿ ಸಭೆ ನಡೆಸಲಾಗಿದೆ’ ಎಂದರು.
‘ಆರೋಗ್ಯ ಮತ್ತು ನೈರ್ಮಲ್ಯ ವಿಭಾಗಕ್ಕೆ ₹42.06 ಲಕ್ಷ ಮೀಸಲಿಡಲಾಗಿದೆ. ಸಾರ್ವಜನಿಕ ಶೌಚಾಲಯಗಳನ್ನು ದುರಸ್ತಿಗೊಳಿಸಿ, ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
‘₹1.05 ಕೋಟಿ ಎಸ್.ಎಫ್.ಸಿ. ಅನುದಾನದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿಕೊಳ್ಳಲಾಗಿದೆ. ₹33.67 ಲಕ್ಷ ವೆಚ್ಚದಲ್ಲಿ ಜಾತ್ರೆಪೇಟೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ. ಬೀದಿದೀಪಗಳ ಅಳವಡಿಕೆ, ಕಾರಂಜಿಗಳ ದುರಸ್ತಿ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.
‘ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕಾರ ನೀಡಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಟೋಯಿಂಗ್ ವಾಹನ ವ್ಯವಸ್ಥೆ ಸೇರಿದಂತೆ ₹21.94 ಲಕ್ಷ ವೆಚ್ಚದಲ್ಲಿ ಸೌಕರ್ಯ ಒದಗಿಸಲಾಗಿದೆ’ ಎಂದು ವಿವರಿಸಿದರು.
ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಸದಸ್ಯ ನಾಗರಾಜ ನಾಯ್ಕ, ಪೌರಾಯುಕ್ತ ಕೇಶವ ಚೌಗುಲೆ, ವಿಶೇಷ ಅಧಿಕಾರಿ ಆರ್.ಎಂ.ವೆರ್ಣೇಕರ್, ಎನ್.ಎಂ.ಮೇಸ್ತ, ನಾರಾಯಣ ನಾಯಕ, ಮಮತಾ ನಾಯ್ಕ, ಸುಬ್ರಹ್ಮಣ್ಯ ಭಟ್, ಇದ್ದರು.