ದಿವಂಗತ ಅನಂತಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ, ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಬೇಡ್ತಿ ನದಿಗೆ ಕಿಂಡಿ ಆಣೆಕಟ್ಟು ನಿರ್ಮಿಸಿ ನೀರು ಪೂರೈಕೆಗಾಗಿ ₹ 13 ಕೋಟಿ ಮಂಜೂರು ಮಾಡಿತ್ತು. 2004ರಲ್ಲಿ ಆರಂಭವಾಗಿ ಕುಂಟುತ್ತ ಸಾಗಿದ ಯೋಜನೆ, ಪಟ್ಟಣದ ಎಲ್ಲೆಡೆ ಪೈಪ್ಲೈನ್ ಹಾಕಿ ಪೂರ್ಣಗೊಂಡಿದ್ದು 2011ರ ವೇಳೆಗೆ. ಆಗ ಯೋಜನೆಯ ವೆಚ್ಚ ₹ 23 ಕೋಟಿ ತಲುಪಿತ್ತು. ಐದು ವರ್ಷ ನೀರು ಪೂರೈಕೆ ಮಾಡಿದ ಯೋಜನೆ, ಬೇಡ್ತಿ ನೀರು ಕುಡಿಯುವ ಯೋಗ್ಯವಿಲ್ಲವೆಂಬ ಕೂಗು, ಸೇತುವೆಯಲ್ಲಿ ನೀರಿನ ಹರಿವನ್ನು ತಡೆಯಲಾಗದ ಪರಿಣಾಮ ಸಮರ್ಪಕ ನೀರು ಪೂರೈಕೆಗೆ ಸಾಕಷ್ಟು ನೀರು ಲಭ್ಯವಾಗಲಿಲ್ಲ. ನೀರು ಪೂರೈಕೆಗೆ ಅಗತ್ಯವಾದ ವಿದ್ಯುತ್ ಲೈನ್ಗಳ ಮೇಲೆ ಮರಗಳು ಬೀಳುವುದರಿಂದ ಪದೇ ಪದೇ ವಿದ್ಯುತ್ ವ್ಯತ್ಯಯವಾಗತೊಡಗಿತ್ತು. ಪರಿಣಾಮ ಕಳೆದ ಮೂರು ವರ್ಷಗಳಿಂದ ಒಂದು ತೊಟ್ಟು ನೀರು ಪಟ್ಟಣಕ್ಕೆ ಪೂರೈಕೆಯಾಗಿಲ್ಲ. ಹಾಳಾಗಿರುವ ಜಾಕ್ವೆಲ್, ಕಿಂಡಿ ಅಣೆಕಟ್ಟಿನಲ್ಲಿ ತುಂಬಿರುವ ಪ್ರವಾಹದ ತ್ಯಾಜ್ಯಗಳು ಇವೆಲ್ಲವೂ ಉಪಯೋಗಕ್ಕೆ ಬಾರದಂತಾಗಿವೆ.