ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರಗಾಂವ: ವಿಜೃಂಭಣೆಯ ರಥೋತ್ಸವ ಸಂಪನ್ನ

ಹಳಿಯಾಳ: ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಭಾಗಿ
Last Updated 13 ಏಪ್ರಿಲ್ 2022, 15:39 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ತೇರಗಾಂವ ಗ್ರಾಮದ ಲಕ್ಷ್ಮಿ ಹಾಗೂ ದುರ್ಗಾ ದೇವಿಯ ಮಹಾರಥೋತ್ಸವವು ಬುಧವಾರ, ಭಕ್ತರ ‘ಉಧೋ ಉಧೋ’ ಘೋಷಣೆಯೊಂದಿಗೆ ವೈಭವದಿಂದ ಸಂಪನ್ನಗೊಂಡಿತು. 12 ವರ್ಷಗಳ ನಂತರ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸೇರಿದ್ದರು.

ಬೆಂಗಳೂರಿನ ಗೋಸಾವಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ದೇವಸ್ಥಾನ ಆಡಳಿತ ಸಮಿತಿಯ ಪ್ರಮುಖರು ಹಾಗೂ ಊರಿನ ಪಂಚರುಮಧ್ಯಾಹ್ನ ಮೂರು ಗಂಟೆಯ ನಂತರ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮೆರವಣಿಗೆಯು ಗ್ರಾಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಗ್ರಾಮದ ವಿವಿಧ ಬಡಾವಣೆಗಳಿಂದ ಸಾಗಿತು. ತೇರಗಾಂವ ಗ್ರಾಮದ ಪ್ರವೇಶ ದ್ವಾರದಲ್ಲಿ ನಿರ್ಮಿಸಿದ ಜಾತ್ರಾ ಗದ್ದುಗೆಯವರೆಗೆ ತೆರಳಿ ಕೊನೆಗೊಂಡಿತು.

ನಂತರ ದೇವಿಯರ ಮೂರ್ತಿಗಳನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿ ಉಡಿ ತುಂಬಲಾಯಿತು. ಏ.17ರವರೆಗೆ ಉಡಿ ತುಂಬಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಂದು ರಾತ್ರಿ ದೇವಿಯರನ್ನು ಸೀಮೆಗೆ ಕಳುಹಿಸುವ ಪದ್ಧತಿ ಆಚರಿಸಲಾಗುವುದು. ಏ.19ರಂದು ಪುನರ್‌ ಪ್ರತಿಷ್ಠಾಪನೆ ನಡೆಯಲಿದೆ.

ರಥೋತ್ಸವದ ಮುನ್ನ ಗ್ರಾಮದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ 12ರವರೆಗೆ ಮತ್ತೊಮ್ಮೆ ದುರ್ಗಾ ಹಾಗೂ ಲಕ್ಷ್ಮಿ ದೇವಿಯರ ಹೊನ್ನಾಟ ನಡೆಯಿತು. ರಥೋತ್ಸವದಲ್ಲಿ ಧಾರವಾಡದ ಕಲಗೇರಿಯ ದುರ್ಗಾದೇವಿ ಜನಪದ ಜಗ್ಗಲಿಗೆ ಮೇಳ ಹಾಗೂ ಹೆಜ್ಜೆಮೇಳ, ಮಹಿಳೆಯರು ಹಾಗೂ ಪುರುಷರ ಡೊಳ್ಳು ವಾದನ ಜನಾಕರ್ಷಿಸಿತು. ರಥೋತ್ಸವದಲ್ಲಿ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT