ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಂದಿರ ದಿನ: ‘ತಂದೆ ಇಲ್ಲದೇ ನಾನು ಶೂನ್ಯ’

Last Updated 19 ಜೂನ್ 2021, 19:31 IST
ಅಕ್ಷರ ಗಾತ್ರ

ಸಿದ್ದಾಪುರ: ‘ನನ್ನ ತಂದೆ ಇಲ್ಲದೇ ನಾನು ಅಕ್ಷರಶಃ ಶೂನ್ಯವಾಗಿದ್ದೇನೆ’. ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಮನಮನೆಯ ವಸಂತ ಎಲ್‌. ನಾಯ್ಕ ತಮ್ಮ ತಂದೆಯ ಬಗ್ಗೆ ಹೀಗೆ ಮಾತಿಗಿಳಿದರು.

ಈ ವರ್ಷ ಜನವರಿಯಲ್ಲಿ ಕೋವಿಡ್‌ನಿಂದ ತಂದೆಯನ್ನು ಕಳೆದುಕೊಂಡಿರುವ ಅವರು, ‘ನನ್ನ ತಂದೆ ಲಕ್ಷ್ಮಣ ಮೈಲಾ ನಾಯ್ಕ, ಅಂದಿನ ಕಾಲದಲ್ಲಿ ಶಾಲಾ ಶಿಕ್ಷಣ ಪಡೆದು, ನೌಕರಿ ಮಾಡಿದ್ದರು. ಅದನ್ನು ತ್ಯಜಿಸಿ, ಊರಿಗೆ ಮರಳಿದ್ದರು. ಅವರಿಗೆ ಆರು ಹೆಣ್ಣು ಮಕ್ಕಳು ಮತ್ತು ನನ್ನನ್ನೂ ಸೇರಿ ಇಬ್ಬರು ಗಂಡುಮಕ್ಕಳು. ಇಡೀ ಕುಟುಂಬವನ್ನು ನಡೆಸಿಕೊಂಡು ಬಂದರು. ನನ್ನ ಅಕ್ಕಂದಿರ ಮದುವೆಯನ್ನೂ ಅವರೇ ಮಾಡಿದ್ದರು. ನಮಗೆಲ್ಲರಿಗೂ ಅವರೇ ಮಾರ್ಗದರ್ಶಕರಾಗಿದ್ದರು. ನಾವು ತಪ್ಪು ಮಾಡಿದರೆ, ತಿದ್ದಿ ಬುದ್ಧಿ ಹೇಳುತ್ತಿದ್ದರು’ ಎಂದರು.

‘ನನ್ನ ತಂದೆ ಯಕ್ಷಗಾನ ಕಲಾವಿದರು ಹಾಗೂ ಭಾಗವತರಾಗಿದ್ದರು. ಆಸಕ್ತರಿಗೆ ಯಕ್ಷಗಾನವನ್ನು ಕಲಿಸುತ್ತಿದ್ದರು. ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರನ್ನೂ ಪ್ರೀತಿಸುವ ಗುಣ ಅವರಿಗಿತ್ತು’ ಎಂದು ಸ್ಮರಿಸಿಕೊಂಡರು.

‘ಕೋವಿಡ್‌ನಿಂದ ನಿಧನರಾಗುವಾಗ ಅವರಿಗೆ 79 ವರ್ಷವಾಗಿತ್ತು. ಆದರೆ, ಬೇರೆ ಯಾವುದೇ ಕಾಯಿಲೆಯೂ ಅವರಿಗೆ ಇರಲಿಲ್ಲ. ನನಗಿಂತಲೂ ಗಟ್ಟಿಮುಟ್ಟಾಗಿದ್ದರು’ ಎಂದರು.

‘ಅವರಿಲ್ಲದೇ ನನಗೆ ಏನು ಬೇಡ ಎಂಬಂತೆ ಆಗಿದೆ. ಅವರು ಈಗಲೂ ಇರಬೇಕಾಗಿತ್ತು ಎಂದು ಆಗಾಗ ಅನಿಸುತ್ತದೆ. ಅವರಿದ್ದಾಗ ನನಗೆ ಮನೆಯ ವ್ಯವಸ್ಥೆಯ ಕಡೆಗೆ ಲಕ್ಷ್ಯ ಕೊಡುವ ಅಗತ್ಯವೇ ಇರಲಿಲ್ಲ. ನನಗೆ ಅವರು ಕೇವಲ ತಂದೆಯಾಗಿರಲಿಲ್ಲ, ದೇವರ ಸ್ಥಾನದಲ್ಲಿದ್ದರು. ನಾನು ಇಂದು ಏನಾದರೂ ಸಾಧನೆ ಮಾಡಿದ್ದರೆ ಅಥವಾ ಸ್ಥಾನಮಾನ ಪಡೆದಿದ್ದರೆ ಅದಕ್ಕೆ ಅವರೇ ಕಾರಣ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT