ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೇ ನಿಂತ ಹೊಸ ಮಾರುಕಟ್ಟೆ ಕಾಮಗಾರಿ: ತ್ರಿಶಂಕು ಸ್ಥಿತಿಯಲ್ಲಿ ಮೀನು ವರ್ತಕರು

ತಾತ್ಕಾಲಿಕ ಶೆಡ್‌ನಲ್ಲಿ ಜಾಗದ ಕೊರತೆ
Last Updated 7 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ನಗರದ ಹೊರ ವಲಯದಲ್ಲಿರುವ ಮೀನು ಮಾರುಕಟ್ಟೆಯ ತಾತ್ಕಾಲಿಕಕಟ್ಟಡದ ಮುಂಭಾಗವನ್ನುರಾಷ್ಟ್ರೀಯ ಹೆದ್ದಾರಿ 66ರಚತುಷ್ಪಥ ಕಾಮಗಾರಿಗಾಗಿ ಭಾಗಶಃ ತೆರವು ಮಾಡಲಾಗಿದೆ. ಇತ್ತ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡ ಕಾಮಗಾರಿಗೆ ಪೂರ್ಣಗೊಂಡಿಲ್ಲ. ಇದರಿಂದ ಮೀನು ಮಾರಾಟಗಾರರ ಸ್ಥಿತಿ ತ್ರಿಶಂಕುವಿನಂತಾಗಿದೆ.

ಒಂದು ವರ್ಷದ ಅವಧಿಯಲ್ಲಿ ಹೊಸ ಕಟ್ಟಡ ನಿರ್ಮಾಣದ ಭರವಸೆಯೊಂದಿಗೆ 2016ರಲ್ಲಿ ಹಳೆಯ ಕಟ್ಟಡವನ್ನು ತೆರವು ಮಾಡಲಾಗಿತ್ತು. ಬಳಿಕ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿತ್ತು. ನಗರಸಭೆ ನೀಡಿದ್ದ ಭರವಸೆಯ ಅವಧಿ ಮುಗಿದಿದ್ದರೂ ಹೊಸ ಕಟ್ಟಡ ನಿರ್ಮಾಣವಾಗದಿರುವುದು ಮೀನುವರ್ತಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ತಾತ್ಕಾಲಿಕ ಕಟ್ಟಡದಲ್ಲಿ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಇದರಿಂದ ನಮಗೂ ಗ್ರಾಹಕರಿಗೂ ಕಿರಿಕಿರಿಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಶೆಡ್‌ನ ಸಿಮೆಂಟ್ ಶೀಟ್ ವಿಪರೀತ ಬಿಸಿಯಾಗಿ ಅಲ್ಲಿರಲೂ ಅಲ್ಲ ಹೊರಗೆ ಬರಲೂ ಅಲ್ಲ ಎಂಬಂತಾಗುತ್ತಿದೆ. ಒಂದು ವರ್ಷದ ಒಳಗೆ ಹೊಸ ಕಟ್ಟಡ ನಿರ್ಮಿಸುವುದಾಗಿ ನೀಡಿದ್ದ ಭರವಸೆಯನ್ನು ನಾವು ನಂಬಿದ್ದೆವು. ಆದರೆ, ಅದು ಹುಸಿಯಾಯಿತು’ ಎಂದು ಮೀನು ಮಾರಾಟಗಾರರಾದ ಸುಶೀಲಾ ಬೇಸರಿಸುತ್ತಾರೆ.

ಹೊಸ ಕಟ್ಟಡಕ್ಕೆ 2017ರ ಕೊನೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು.ಒಟ್ಟು ₹ 4 ಕೋಟಿ ವೆಚ್ಚದ ಈ ಕಾಮಗಾರಿಗೆ 2018ರಲ್ಲಿ ಅಂದಿನ ಶಾಸಕ ಸತೀಶ ಸೈಲ್ ಭೂಮಿಪೂಜೆ ಮಾಡಿದ್ದರು. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು, ಎರಡು ಅಂತಸ್ತುಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ನಂತರ ಯಾವುದೇ ಪ್ರಗತಿಯಾಗಿಲ್ಲ.

ಹದ್ದುಗಳ ಕಾಟ:ಮೀನು ವ್ಯಾಪಾರಿಗಳಲ್ಲಿ ಮಹಿಳೆಯರೇ ಬಹುತೇಕರಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಯ ಒಳಗೆ ಸೆಕೆಯಿಂದ, ಸ್ಥಳಾಭಾವದಿಂದ ಹೊರಗೆ ಕುಳಿತುಕೊಳ್ಳುತ್ತಾರೆ. ಆದರೆ, ಆಕಾಶದಲ್ಲಿ ಹಿಂಡು ಹಿಂಡಾಗಿ ಹಾರುತ್ತ ಬರುವ ಹದ್ದುಗಳು ಆತಂಕದ ವಾತಾವರಣ ಮೂಡಿಸುತ್ತಿವೆ. ಮೀನನ್ನು ಹಿಡಿಯಲು ಕಾಲು ಚಾಚಿ ಕೆಳಗೆ ಇಳಿಯುವ ಅವು, ಮಹಿಳೆಯರ ಹಾಗೂ ಗ್ರಾಹಕರ ಮೇಲೆ ದಾಳಿ ಮಾಡಿ ಗಾಯಗೊಳಿಸುವ ಅಪಾಯವಿದೆ ಎನ್ನುತ್ತಾರೆ ಗ್ರಾಹಕ ಸಂತೋಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT