‘ನಿರಾಶ್ರಿತರ ಕೆಂದ್ರದಿಂದ ಗ್ರಾಮಕ್ಕೆ ಮರಳಿದ ನಂತರ, ಈ ಶಾಲೆಯೇ ಮನೆಯಾಗಿದೆ. ಉಕ್ಕಿ ಹರಿದ ಬೇಡ್ತಿ ಹಳ್ಳದಲ್ಲಿ ಮನೆ ತೇಲಿಹೋಗಿದೆ. ಮನೆ ಕುರುಹು ಕೂಡ ಸಿಗುವುದಿಲ್ಲ. ಆ ಜಾಗದಲ್ಲಿ, ಸದ್ಯ ಜಾನುವಾರುಗಳನ್ನು ಸಾಕಲು ಕೊಟ್ಟಿಗೆ ಕಟ್ಟಲಾಗಿದೆ. ಅಲ್ಲಿ ಮನೆ ಕಟ್ಟಿಕೊಳ್ಳಲು ಮತ್ತೆ ಹಳ್ಳ ಉಕ್ಕಿ ಬಂದಿತು ಎಂಬ ಭಯ ಒಂದೆಡೆಯಾದರೆ, ವಾಸವಿದ್ದ ಸ್ಥಳ ಅರಣ್ಯ ಭೂಮಿ ಆಗಿದೆ. ಗ್ರಾಮದಲ್ಲಿ ಬೇರೆ ಎಲ್ಲಿಯೂ ಜಾಗ ಸಿಗುತ್ತಿಲ್ಲ’ ಎಂದು ಭಾಗು ಧೂಯಿಪಡೆ ಬೇಸರಿಸಿದರು.