ಕಾರವಾರ: ವಿಮಾನಯಾನ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತಾಲ್ಲೂಕಿನ ಕೈಗಾದ ಅಣು ವಿದ್ಯುತ್ ಸ್ಥಾವರದ ಹಿರಿಯ ಅಧಿಕಾರಿಯೊಬ್ಬರಿಗೆ ₹ 3 ಲಕ್ಷ ವಂಚಿಸಿದ್ದಾನೆ.
ಅಣು ವಿದ್ಯುತ್ ಸ್ಥಾವರದ ಅಧಿಕಾರಿಯು ಮೇ 29ರಂದು ಗೋವಾದಿಂದ ಜೈಪುರಕ್ಕೆ ಇಂಡಿಗೊ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಆ ವಿಮಾನದ ಸಂಚಾರ ರದ್ದಾಗಿತ್ತು. ಟಿಕೆಟ್ ಮೊತ್ತವು ಜೂನ್ 5ರವರೆಗೂ ಅವರ ಬ್ಯಾಂಕ್ ಖಾತೆಗೆ ಮರು ಪಾವತಿ ಆಗಿರಲಿಲ್ಲ.
ಈ ಬಗ್ಗೆ ವಿಚಾರಿಸಲೆಂದು ವಿಮಾನಯಾನ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಗೂಗಲ್ ಮೂಲಕ ಹುಡುಕಿದ್ದರು. ಅವರ ಕರೆ ಸ್ವೀಕರಿಸಿದ್ದ ವ್ಯಕ್ತಿಯು ಸಹಾಯ ಮಾಡುವುದಾಗಿ ತಿಳಿಸಿ, ‘ಎನಿಡೆಸ್ಕ್’ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದ.
ಅದರಂತೆ ಅಧಿಕಾರಿಯು ಆ್ಯಪ್ ಅಳವಡಿಸಿಕೊಂಡು ಬ್ಯಾಂಕ್ ಖಾತೆ, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಮುಂತಾದ ಅಗತ್ಯ ಮಾಹಿತಿಗಳನ್ನು ನಮೂದಿಸಿದ್ದರು. ಅದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಒಮ್ಮೆ ₹ 1 ಲಕ್ಷ ಹಾಗೂ ಮತ್ತೊಮ್ಮೆ ₹ 2 ಲಕ್ಷವನ್ನು ಆರೋಪಿಯು ಲಪಟಾಯಿಸಿದ್ದಾನೆ.
ಈ ಬಗ್ಗೆ ನಗರದ ಸಿ.ಇ.ಎನ್ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.