ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರ ಮೂಲ ಸ್ವರೂಪ!

Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವ ಮನವಿಯನ್ನು ರಾಜ್ಯಸಭೆಯ ಸಭಾಪತಿ ತಿರಸ್ಕರಿಸಿರುವುದರಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕರು ಬೇಸರಗೊಂಡಿರುವ ಕಾರಣ, ನ್ಯಾಯಮೂರ್ತಿಗಳ ಪದಚ್ಯುತಿ ವಿಚಾರದಲ್ಲಿ ಈ ಪಕ್ಷದ ಇದುವರೆಗಿನ ನಡೆ ಹೇಗಿದೆ ಎಂಬುದನ್ನು ಪರಿಶೀಲಿಸುವುದು ಉತ್ತಮ.

ನ್ಯಾಯಮೂರ್ತಿಗಳ ಪದಚ್ಯುತಿಗೆ ಸಂಬಂಧಿಸಿದ ಈ ಹಿಂದಿನ ಬರಹದಲ್ಲಿ ಉಲ್ಲೇಖಿಸಿರುವಂತೆ, 1970ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸಲ್ಲಿಕೆಯಾಗಿದ್ದ ಪದಚ್ಯುತಿ ಮನವಿಯನ್ನು ಅಂದಿನ ಸ್ಪೀಕರ್ ಜಿ.ಎಸ್. ಧಿಲ್ಲೋನ್ ಅವರು ‘ಇದು ಹುಡುಗಾಟಿಕೆಯದ್ದು’ ಎಂದು ಹೇಳಿ ಪ್ರಾಥಮಿಕ ಹಂತದಲ್ಲಿಯೇ ತಿರಸ್ಕರಿಸಿದ್ದರು. ಹೀಗಿರುವಾಗ, ಸಿಜೆಐ ದೀಪಕ್ ಮಿಶ್ರಾ ಅವರ ವಿರುದ್ಧ ಸಲ್ಲಿಕೆಯಾದ ಮನವಿಯನ್ನು ಪ್ರಾಥಮಿಕ ಹಂತದಲ್ಲಿ ತಿರಸ್ಕರಿಸಲು ವೆಂಕಯ್ಯ ನಾಯ್ಡು ಅವರಿಗೆ ಹಕ್ಕಿಲ್ಲ ಎಂದು ಹೇಳುವುದು ಹೇಗೆ? ಅಲ್ಲದೆ, ನ್ಯಾಯಾಂಗದ ಪ್ರತಿಷ್ಠೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಷ್ಟೊಂದು ಚಿಂತಿತವಾಗಿದೆ ಎಂದಾದರೆ, ದುರ್ನಡತೆಯ ಗಂಭೀರ ಆರೋಪ ಎದುರಿಸುತ್ತಿದ್ದ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರ ಪದಚ್ಯುತಿಗೆ ಸಲ್ಲಿಸಿದ್ದ ಮನವಿಗೆ ಪಕ್ಷ 1993ರಲ್ಲಿ ಲೋಕಸಭೆಯಲ್ಲಿ ಏಕೆ ಬೆಂಬಲ ನೀಡಲಿಲ್ಲ?

ರಾಮಸ್ವಾಮಿ ಅವರ ಪದಚ್ಯುತಿಗೆ ಪ್ರಯತ್ನ ನಡೆದು ಕಾಲು ಶತಮಾನ ಕಳೆದುಹೋಗಿರುವ ಕಾರಣ, ಈ ಪ್ರಕರಣದ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದುಕೊಳ್ಳಬೇಕು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರನ್ನು ಪದಚ್ಯುತಿಗೊಳಿಸುವ ಮನವಿಯನ್ನು ಮಧು ದಂಡವತೆ ಮತ್ತು ಲೋಕಸಭೆಯ ಇತರ 107 ಸದಸ್ಯರು ಸ್ಪೀಕರ್ ಅವರಿಗೆ 1991ರ ಫೆಬ್ರುವರಿ 21ರಂದು ಸಲ್ಲಿಸಿದ್ದರು. ನ್ಯಾಯಮೂರ್ತಿ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ದುರ್ನಡತೆ ತೋರಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದ್ದು ಇದು. ಅಧಿಕಾರದ ವ್ಯಾಪಕ ದುರ್ಬಳಕೆ ಸೇರಿದಂತೆ ರಾಮಸ್ವಾಮಿ ವಿರುದ್ಧ ಇಲ್ಲಿ ಉಲ್ಲೇಖಿಸಿದ ಆರೋಪಗಳು ಕೇಳಿಬಂದಿದ್ದವು: ತಮ್ಮ ನಿವಾಸ ಮತ್ತು ಹೈಕೋರ್ಟ್‌ಗೆ ₹ 50 ಲಕ್ಷ ಮೌಲ್ಯದ ಪೀಠೋಪಕರಣಗಳು ಹಾಗೂ ನೆಲಹಾಸುಗಳನ್ನು ಕೆಲವೇ ಕೆಲವು ಆಯ್ದ ಡೀಲರ್‌ಗಳಿಂದ, ಹೆಚ್ಚಿನ ಮೌಲ್ಯಕ್ಕೆ, ಟೆಂಡರ್ ಕರೆಯದೆ ಖರೀದಿ ಮಾಡಿದ್ದು, ತಮ್ಮ ಅಧಿಕೃತ ನಿವಾಸಕ್ಕೆ ₹ 38,500 ಮೌಲ್ಯದ ಪೀಠೋಪಕರಣಗಳು ಮತ್ತು ನೆಲಹಾಸುಗಳನ್ನು ಮಾತ್ರ ಖರೀದಿ ಮಾಡಲು ಅವಕಾಶ ಇದ್ದರೂ ಒಟ್ಟು ₹ 13 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದವುಗಳನ್ನು ಖರೀದಿಸಿದ್ದು, ₹ 3.60 ಲಕ್ಷ ಬೆಲೆಬಾಳುವ ಬೆಳ್ಳಿ ಗದೆಗಳನ್ನು ತೀರಾ ಹೆಚ್ಚು ಬೆಲೆಗೆ ಬಿಡ್ ಕರೆಯದೆಯೇ ತಮ್ಮ ಊರಿನ ವ್ಯಾಪಾರಿಯೊಬ್ಬರಿಂದ ಖರೀದಿಸಿದ್ದು (ಇವುಗಳು ವಸಾಹತು ಕಾಲದ ಪಳೆಯುಳಿಕೆಗಳು, ಇವುಗಳನ್ನು ಖರೀದಿಸುವುದು ಬೇಡ ಎಂದು ಇತರ ನ್ಯಾಯಮೂರ್ತಿಗಳು ಹೇಳಿದ್ದರು), ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಚಂಡೀಗಡದಲ್ಲಿ ತಮ್ಮ ನಿವಾಸದ ಟೆಲಿಫೋನ್‌ ಬಿಲ್ ಮೊತ್ತವನ್ನು ₹ 9.10 ಲಕ್ಷಕ್ಕೆ ಹೆಚ್ಚಿಸಿದ್ದು, ಮದ್ರಾಸ್‌ನಲ್ಲಿ ತಮ್ಮ ನಿವಾಸದ ಟೆಲಿಫೋನ್ ಬಿಲ್ ಮೊತ್ತವನ್ನು ಹೈಕೋರ್ಟ್‌ನಿಂದ ಪಾವತಿಸುವಂತೆ ಮಾಡಿದ್ದು.

ಆದರೆ, ರಾಮಸ್ವಾಮಿ ಅವರು ಸುಳ್ಳು ಪೆಟ್ರೋಲ್‌ ಬಿಲ್‌ ಮತ್ತು ಕಾರು ರಿಪೇರಿ ಬಿಲ್‌ ನೀಡಿ, ಹಣ ಪಡೆದುಕೊಂಡಿದ್ದು ಅತ್ಯಂತ ಅವಮಾನಕಾರಿ ಆರೋಪಗಳು. ಕೋರ್ಟ್‌ಗಾಗಿ ಮೀಸಲಿಟ್ಟ ಹಣದಲ್ಲಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಬಳಸುವ ಪೀಠೋಪಕರಣಗಳನ್ನು, ನೆಲಹಾಸುಗಳನ್ನು ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದರು, ಸಾರ್ವಜನಿಕರ ಹಣದಲ್ಲಿ ತಮ್ಮ ನಿವಾಸದ ಬಳಕೆಗಾಗಿ ಖರೀದಿಸಿದ ಹಲವು ಪೀಠೋಪಕರಣಗಳು, ನೆಲಹಾಸುಗಳು ಮತ್ತು ಸೂಟ್‌ಕೇಸ್‌ಗಳನ್ನು ಹಳೆಯ ಹಾಗೂ ಕಳಪೆ ಗುಣಮಟ್ಟದ ವಸ್ತುಗಳಿಗೆ ಬದಲಾಯಿಸಿಕೊಂಡಿದ್ದರು ಎಂಬ ಆರೋಪಗಳೂ ಅವುಗಳಲ್ಲಿ ಸೇರಿವೆ. ಆರೋಪಗಳು ಇನ್ನೂ ಹಲವಿವೆ. ಆದರೆ ಚುಟುಕಾಗಿ ಹೇಳಬೇಕು ಎಂಬ ಉದ್ದೇಶದಿಂದ, ಈ ನ್ಯಾಯಮೂರ್ತಿಯ ಸಣ್ಣತನದ ವರ್ತನೆಗಳ ಇತರ ಹಲವು ನಿದರ್ಶನಗಳನ್ನು ಇಲ್ಲಿ ಉಲ್ಲೇಖಿಸಿಲ್ಲ. ನ್ಯಾಯಾಂಗದ ಹಿರಿಯ ಸದಸ್ಯರೊಬ್ಬರ ಮೇಲೆ ಇವರ ಮೇಲೆ ಇದ್ದಿದ್ದಕ್ಕಿಂತ ಹೆಚ್ಚು ಗಂಭೀರವಾದ ದೋಷಾರೋಪ ಇದ್ದಿರಲಿಲ್ಲ ಎಂಬುದು ನನ್ನ ಭಾವನೆ. ಹೀಗಿದ್ದರೂ, ಅವರನ್ನು ಮುಂಚೂಣಿಯಲ್ಲಿ ನಿಂತು ಸಮರ್ಥಿಸಿಕೊಂಡ
ವರು ಕಪಿಲ್ ಸಿಬಲ್. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ರಾಮಸ್ವಾಮಿ ಅವರನ್ನು ವಾಗ್ದಂಡನೆಗೆ ಗುರಿಪಡಿಸಬೇಕು ಅನ್ನಿಸಲಿಲ್ಲ!

ಸ್ಪೀಕರ್‌ ರವಿ ರಾಯ್ ಅವರು ವಾಗ್ದಂಡನೆ ಮನವಿಯನ್ನು ಅಂಗೀಕರಿಸಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಸಾವಂತ್, ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದೇಸಾಯಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಅವರನ್ನು ಒಳಗೊಂಡ ವಿಚಾರಣಾ ಸಮಿತಿ ರಚಿಸಿದರು. ಈ ಸಮಿತಿಯು 1992ರ ಜುಲೈನಲ್ಲಿ ಸ್ಪೀಕರ್‌ ಅವರಿಗೆ ವರದಿ ಸಲ್ಲಿಸಿತು. ‘ನ್ಯಾಯಮೂರ್ತಿ ರಾಮಸ್ವಾಮಿ ಅವರ ವರ್ತನೆಯು ಅಧಿಕಾರವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿರುವುದನ್ನು ತೋರಿಸುತ್ತದೆ. ಕರ್ತವ್ಯ ಪಾಲನೆಯಲ್ಲಿ ಉದ್ದೇಶಪೂರ್ವಕವಾಗಿ, ನಿರಂತರವಾಗಿ ನಿರ್ಲಕ್ಷ್ಯ ತೋರಿರುವುದನ್ನು ಕಾಣಿಸುತ್ತಿದೆ. ಸಾರ್ವಜನಿಕ ಹಣದ ಬಳಕೆಯನ್ನು ಉದ್ದೇಶಪೂರ್ವಕವಾಗಿ, ಯಥೇಚ್ಛವಾಗಿ ಮಾಡಿರುವುದು ಕಾಣಿಸುತ್ತಿದೆ. ಸಾರ್ವಜನಿಕ ಹಣವನ್ನು ಖಾಸಗಿ ಉದ್ದೇಶಗಳಿಗೆ ಬಗೆಬಗೆಯಲ್ಲಿ ಬಳಸಿಕೊಂಡು ನೈತಿಕ ಕಿಡಿಗೇಡಿತನ ಪ್ರದರ್ಶಿಸಲಾಗಿದೆ. ಶಾಸನಬದ್ಧ ನಿಯಮಗಳಿಗೆ ಅಗೌರವ ತೋರಲಾಗಿದೆ. ಅವರ ವರ್ತನೆಯು ನ್ಯಾಯಾಂಗದ ಉನ್ನತ ಹುದ್ದೆಗೆ ಅಗೌರವ ತರುವಂಥದ್ದಾಗಿದೆ. ನ್ಯಾಯಾಂಗಕ್ಕೆ ಕೂಡ ಅಗೌರವ ತರುವಂಥದ್ದು ಅದು. ನ್ಯಾಯಾಂಗದಲ್ಲಿ ಜನ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಕುಂದು ತರುತ್ತದೆ. ಅವರು ಎಸಗಿರುವ ಕೃತ್ಯಗಳು ಹೇಗಿವೆ ಅಂದರೆ, ಅವರನ್ನು ಅಧಿಕಾರದಲ್ಲಿ ಮುಂದುವರಿಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ನ್ಯಾಯಾಂಗದ ದೃಷ್ಟಿಯಿಂದ ಉತ್ತಮವಲ್ಲ’ ಎಂದು ವರದಿ ಹೇಳಿತು. ಈ ನ್ಯಾಯಮೂರ್ತಿಯ ವರ್ತನೆ ತೀರಾ ಸಣ್ಣತನದಿಂದ ಕೂಡಿತ್ತು. ಏಕೆಂದರೆ, ಚಂಡೀಗಡದಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಅವರು ಹಸ್ತಾಂತರ ಮಾಡಿದಾಗ, ಅಲ್ಲಿದ್ದ ಹಲವು ವಸ್ತುಗಳು ಕಾಣೆಯಾಗಿದ್ದವು! ತಾವು ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆಯುವುದಕ್ಕೆ ಮುನ್ನ ಹೈಕೋರ್ಟ್‌ನ ಕಡೆಯಿಂದ ತರಿಸಿಕೊಂಡಿದ್ದ ಐದು ಹೊಸ ಸೂಟ್‌ಕೇಸುಗಳು ಕೂಡ ಕಾಣೆಯಾದವುಗಳಲ್ಲಿ ಸೇರಿದ್ದವು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ಮೇಲೆ ಬಂದ ಅತ್ಯಂತ ಗಂಭೀರ ದೋಷಾರೋಪ ಇದಾಗಿರಬೇಕು. ಹೀಗಿದ್ದರೂ, ನ್ಯಾಯಮೂರ್ತಿ ರಾಮಸ್ವಾಮಿ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಮನವಿಯನ್ನು ಲೋಕಸಭೆಯಲ್ಲಿ 1993ರ ಮೇ ತಿಂಗಳಲ್ಲಿ ಮತಕ್ಕೆ ಹಾಕಿದಾಗ, ಅವರಿಗೆ ತಪ್ಪಿಸಿಕೊಳ್ಳಲು ಸಹಾಯವಾಗುವಂತೆ ಮಾಡಿತು ಕಾಂಗ್ರೆಸ್. ಅವರನ್ನು ಕಾನೂನಿನ ಕೈಯಿಂದ ರಕ್ಷಿಸುವಲ್ಲಿ ಕಪಿಲ್ ಸಿಬಲ್ ಅವರು ಮುಖ್ಯ ‍ಪಾತ್ರ ವಹಿಸಿದರು.

ದುರ್ನಡತೆ ತೋರಿದ ಗಂಭೀರ ಆರೋಪ ಎದುರಿಸಿದ ಇನ್ನೊಬ್ಬ ನ್ಯಾಯಮೂರ್ತಿ ಕಲ್ಕತ್ತಾ ಹೈಕೋರ್ಟ್‌ನ ಸೌಮಿತ್ರ ಸೆನ್. ₹ 33.22 ಲಕ್ಷ ಅವ್ಯವಹಾರ ನಡೆಸಿದ ಆರೋಪ ಅವರ ವಿರುದ್ಧ ಇತ್ತು.

ನ್ಯಾಯಮೂರ್ತಿಗಳಾದ ರಾಮಸ್ವಾಮಿ ಮತ್ತು ಸೌಮಿತ್ರ ಸೆನ್‌ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗಂಭೀರ ಆರೋಪಗಳನ್ನು ಹೊರಿಸಲಾಗಿತ್ತು, ಆರೋಪಗಳಿಗೆ ಪೂರಕವಾಗಿ ಆಧಾರಗಳು ಇದ್ದವು. ಆದರೆ, ದೀಪಕ್‌ ಮಿಶ್ರಾ ಅವರ ವಿರುದ್ಧದ ಮನವಿಗೆ ಸಹಿ ಮಾಡಿರುವವರಿಗೆ ‘ತಾವೇಕೆ ಸಹಿ ಮಾಡಿದ್ದೇವೆ ಎಂಬುದು ತಮಗೇ ಸರಿಯಾಗಿ ಗೊತ್ತಿಲ್ಲದ’ ಸ್ಥಿತಿ ಇತ್ತು. ಉದಾಹರಣೆಗೆ, ಸಿಜೆಐ ಅವರು ‘ಅಕ್ರಮವಾಗಿ ಲಾಭ ಮಾಡಿಕೊಡುವ ಪಿತೂರಿಯಲ್ಲಿ ಭಾಗಿ ಆಗಿದ್ದಿರಬಹುದು’ ಎಂದು ಮನವಿಗೆ ಸಹಿ ಮಾಡಿದವರು ಒಂದೆಡೆ ಹೇಳಿರುವುದಾಗಿ ರಾಜ್ಯಸಭೆಯ ಸಭಾಪತಿ ಉಲ್ಲೇಖಿಸಿದ್ದಾರೆ. ಮನವಿಗೆ ಸಹಿ ಮಾಡಿದವರು ಇನ್ನೊಂದೆಡೆ ‘ಸಿಜೆಐ ಅವರು ಕೂಡ ತನಿಖೆಯ ವ್ಯಾಪ್ತಿಯೊಳಗೆ ಬರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ಹಾಗಾಗಿ, ‘ವಿಶ್ವಸಾರ್ಹ ಮತ್ತು ಪರಿಶೀಲಿಸಿ ನೋಡಬಹುದಾದ ಸಾಕ್ಷಿಗಳು ನನ್ನೆದುರು ಇಲ್ಲದಿರುವಾಗ ಮನವಿಯಲ್ಲಿರುವುದನ್ನು ಒಪ್ಪಿಕೊಳ್ಳುವುದು ಸೂಕ್ತವಾಗುವುದಿಲ್ಲ, ಜವಾಬ್ದಾರಿಯುತ ನಡೆಯೂ ಆಗುವುದಿಲ್ಲ’ ಎಂದು ಸಭಾಪತಿ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ವಿ. ರಾಮಸ್ವಾಮಿ ಮತ್ತು ಸೌಮಿತ್ರ ಸೆನ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಮನವಿಗಳು ಹಾಗೂ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಲ್ಲಿಕೆಯಾಗಿದ್ದ ಮನವಿಯನ್ನು ತುಲನೆ ಮಾಡಿ ನೋಡಿದವರಿಗೆ, ಅವುಗಳಲ್ಲಿನ ವ್ಯತ್ಯಾಸ ಗೊತ್ತಾಗುತ್ತದೆ.

ನ್ಯಾಯಾಂಗದ ಸ್ವಾತಂತ್ರ್ಯದ ವಿಚಾರವಾಗಿ ಕಾಂಗ್ರೆಸ್ಸಿಗೆ ಇರುವ ಬದ್ಧತೆಯ ಬಗ್ಗೆಯೂ ಒಂದು ಮಾತು. ‘ಬದ್ಧವಾಗಿರುವ ನ್ಯಾಯಾಂಗ’ ಬೇಕು ಎಂದು ಈ ಪಕ್ಷ 70ರ ದಶಕದಲ್ಲಿ ಬಲವಾಗಿ ಅಭಿಯಾನ ನಡೆಸಿತು. ಈ ರೀತಿಯ ಅಭಿಯಾನ ನಡೆದಿದ್ದು, ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ. ‘ಬದ್ಧವಾಗಿರುವ ನ್ಯಾಯಾಂಗ’ ಅಂದರೆ ಪಕ್ಷ ಮತ್ತು ಅದರ ನಾಯಕಿ ಇಂದಿರಾ ಗಾಂಧಿ ಅವರಿಗೆ ಬದ್ಧವಾಗಿರುವುದು ಎಂದು. ಉನ್ನತ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಳ್ಳಲು ಇದೇ ಪಕ್ಷವು ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದಿತು. ಸುಪ್ರೀಂ ಕೋರ್ಟ್‌ ಬಗ್ಗೆ ಈ ಪಕ್ಷ ಹೊಂದಿದ್ದ ಗೌರವ ಎಂಥದ್ದು ಎಂಬುದು ಅದರ ನಾಯಕರು 42ನೇ ತಿದ್ದುಪಡಿ ಸಂದರ್ಭದಲ್ಲಿ ಸಂಸತ್ತಿನಲ್ಲಿ ಆಡಿದ ಮಾತುಗಳು ಸಮರ್ಥವಾಗಿ ವಿವರಿಸುತ್ತವೆ. ಆ ಮಾತುಗಳ ಉದಾಹರಣೆಗಳು ಇಲ್ಲಿವೆ:

ಸಿ.ಎಂ. ಸ್ಟೀಫನ್: (42ನೇ ತಿದ್ದುಪಡಿ ಮೂಲಕ) ಈ ಸಂಸತ್ತಿನ ಅಧಿಕಾರವು ಯಾವುದೇ ಕೋರ್ಟ್‌ಗಳ ವ್ಯಾಪ್ತಿಯನ್ನು ಮೀರಿದ್ದು ಎಂದು ಘೋಷಿತವಾಗಿದೆ. ಇದನ್ನು ಉಲ್ಲಂಘಿಸಬೇಕೇ ಎಂಬುದು ಈಗ ಕೋರ್ಟ್‌ಗಳಿಗೆ ಬಿಟ್ಟ ವಿಚಾರ. ಹಾಗೆ ಮಾಡುವ ಅತಿಯಾದ ಆತ್ಮವಿಶ್ವಾಸ ಅವುಗಳಿಗೆ ಇದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಹಾಗೆ ಮಾಡಿದ್ದೇ ಆದಲ್ಲಿ, ಅದು ನ್ಯಾಯಾಂಗದ ಪಾಲಿಗೆ ಕೆಟ್ಟ ದಿನ ಆಗಲಿದೆ. ನ್ಯಾಯಮೂರ್ತಿಗಳ ನಡತೆ ಮತ್ತು ಅದರಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಸದನದ ಸಮಿತಿ ಇದೆ. ನಮಗೆ ನಮ್ಮದೇ ಆದ ವಿಧಾನಗಳು, ನಮ್ಮವೇ ಆದ ರೀತಿಗಳು ಇವೆ.

ಸ್ವರಣ್ ಸಿಂಗ್: ಕೋರ್ಟ್‌ಗಳು ತಮ್ಮ ಮಿತಿಯನ್ನು ಮೀರಿವೆ, ಇದು ದುರದೃಷ್ಟಕರ. ಇದು ಒರಟಾದ ಆಕ್ರಮಣ.

ಎನ್.ಕೆ.ಪಿ. ಸಾಳ್ವೆ: ಸಂವಿಧಾನವನ್ನು ಕೋರ್ಟ್‌ಗಳಿಂದ ರಕ್ಷಿಸಬೇಕಾದ ಸಮಯ ಎಲ್ಲ ದೇಶಗಳ ಕಾಲಾವಧಿಯಲ್ಲಿಯೂ ಒಮ್ಮೆ ಬರುತ್ತದೆ.

ಕಾಂಗ್ರೆಸ್ಸಿನ ಹೊಸ ತಲೆಮಾರಿನವರು ತಮ್ಮ ಪಕ್ಷದ ಇತಿಹಾಸ, ನಮ್ಮ ಸಂವಿಧಾನ ಮತ್ತು ನ್ಯಾಯಾಂಗದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT