ಶಿರಸಿ: ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆ ಸುರಿಯುತ್ತಿದೆ. ಏಕಾಏಕಿ ಸುರಿಯಲಾರಂಭಿಸಿದ ಮಳೆಯಿಂದಾಗಿ ಮಾರಿಕಾಂಬಾ ದೇವಿ ಜಾತ್ರೆಪೇಟೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ.
ದೇವಿ ಗದ್ದುಗೆಯ ಎದುರು ಜಾತ್ರೆ ವೇಳೆ ನಿರ್ಮಿಸಿದ ಮುಂಭಾಗದ ಮಂಟಪದ ಗೋಪುರ ಗಾಳಿಯ ರಭಸಕ್ಕೆ ಕಳಚಿ ಬಿದ್ದಿದೆ. ಮಂಟಪದ ಒಳಭಾಗದಲ್ಲಿ ದೇವಿದರ್ಶನಕ್ಕೆ ಕಾದಿದ್ದ ಭಕ್ತರನ್ನು ಮುನ್ನೆಚ್ಚರಿಕೆಗಾಗಿ ಹೊರಕ್ಕೆ ಕಳಿಸಲಾಯಿತು.
ಸಂಜೆ 5.50ರ ಸುಮಾರಿಗೆ ಜೋರಾದ ಗಾಳಿ ಬೀಸುವ ಜತೆಗೆ ಮಳೆ ಸುರಿಯಲಾರಂಭಿಸಿತು. ತಾತ್ಕಾಲಿಕ ಅಂಗಡಿಮುಂಗಟ್ಟುಗಳ ಚಾವಣಿ ಹಾರಿಬಿದ್ದವು. ಸಿಹಿ ತಿನಿಸು, ಬಟ್ಟೆ, ಆಟಿಕೆ ಸಾಮಗ್ರಿಗಳು ನೀರು ಪಾಲಾದವು. ನೂರಾರು ಜನರು ಅಂಗಡಿಗಳು, ಕಟ್ಟಡಗಳ ಆಶ್ರಯಿಸಿದರು.