ಮಂಡ್ಯ: ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಪೆಂಟಾವಲೆಂಟ್ ಲಸಿಕೆಯಿಂದಲೇ ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ಇಬ್ಬರು ಮಕ್ಕಳು ಮೃತಪಟ್ಟಿವೆ ಎಂದು ಪೋಷಕರು ಆರೋಪಿಸಿದ್ದಾರೆ.
ಚಿನ್ನಗಿರಿದೊಡ್ಡಿ ಗ್ರಾಮದ ಪ್ರೀತಂ (ಒಂದುವರೆ ತಿಂಗಳು), ಭುವನ್ (ಎರಡುವರೆ ತಿಂಗಳು) ಮೃತಪಟ್ಟ ಮಕ್ಕಳು.
ಶುಕ್ರವಾರ ಬೆಳಿಗ್ಗೆ ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಚಿಂದಗಿರಿದೊಡ್ಡಿ ಹಾಗೂ ಗೋಪಾಲಪುರ ಗ್ರಾಮಗಳ 9 ಮಕ್ಕಳಿಗೆ ಪೆಂಟಾವಲೆಂಟ್ ಲಸಿಕೆ ಹಾಕಿದ್ದರು. ರಾತ್ರಿ ಪ್ರೀತಂ ಮೃತಪಟ್ಟಿದ್ದು ಶನಿವಾರ ಬೆಳಿಗ್ಗೆ ಇನ್ನೊಂದು ಮಗು ಮೃತಪಟ್ಟಿದೆ.
ಲಸಿಕೆಯಿಂದಾಗಿಯೇ ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಿ ಗ್ರಾಮಸ್ಥರು ನಗರದ ಮಿಮ್ಸ್ ಆಸ್ಪತ್ರೆ ಎದುರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಲಸಿಕೆ ನೀಡಿದ್ದ ಉಳಿದ 7 ಮಕ್ಕಳನ್ನು ಆಸ್ಪತ್ರೆಗೆ ಕರೆಸಿ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
‘ಪೆಂಟಾವಲೆಂಟ್ ಲಸಿಕೆಯಿಂದಲೇ ಮಕ್ಕಳು ಮೃತಪಟ್ಟಿವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಈ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಉಳಿದ ಏಳು ಮಕ್ಕಳು ಆರೋಗ್ಯವಾಗಿದ್ದು ಯಾವುದೇ ಅಪಾಯ ಇಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು.