ಕಾರವಾರ: ‘ಭಾರತ್ ಬಂದ್’ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ– ಕಾಲೇಜುಗಳಿಗೆ ಜ.8ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ಭಾನುವಾರ ತರಗತಿಗಳನ್ನು ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ಎಂದಿನಂತೆ ಬಸ್ ಸಂಚಾರ:
‘ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರ ಎಂದಿನಂತೆ ಇರಲಿದೆ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ’ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದೂಸ್ ತಿಳಿಸಿದ್ದಾರೆ.
‘ಕಾರವಾರ, ಅಂಕೋಲಾ ಆಟೊ ರಿಕ್ಷಾ ಹಾಗೂ ಟೆಂಪೊ ಒಕ್ಕೂಟವೂ ಮುಷ್ಕರಕ್ಕೆ ಬೆಂಬಲ ನೀಡಲಿದೆ. ಹೀಗಾಗಿ ಈ ಭಾಗದಲ್ಲಿ ನಮ್ಮ ವಾಹನಗಳು ಸಂಚರಿಸುವುದಿಲ್ಲ’ ಎಂದು ಆಟೊ ಚಾಲಕ ಹಾಗೂ ಮಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಅರ್ಗೇಕರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಜ.8 ಹಾಗೂ 9ರ ‘ಭಾರತ್ ಬಂದ್’ಗೆ ಕರೆ ನೀಡಿವೆ. ಇದಕ್ಕೆ ಎಲ್ಐಸಿ, ಬಿಎಸ್ಎನ್ಎಲ್ ನೌಕರರ ಸಂಘ, ಸಿಐಟಿಯು, ಸಿಪಿಐ(ಎಂ), ಎಸ್ಎಫ್ಐ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.