ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕಾ ಬೆಳೆ ರಕ್ಷಣೆಗೆ ಮಾಹಿತಿ, ಉಪಬೆಳೆ ಬೆಳೆಯಲು ಸಲಹೆ

Last Updated 18 ಮೇ 2019, 13:23 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲ ಮುಂಚಿತವಾಗಿ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಇಲ್ಲಿನ ಹಾರ್ಟಿ ಕ್ಲಿನಿಕ್ ರೈತರಿಗೆ ಕೆಲವು ಸಲಹೆಗಳನ್ನು ನೀಡಿದೆ.

ಈ ವರ್ಷ ಬೇಸಿಗೆಯ ಅತಿಯಾದ ಉಷ್ಣಾಂಶದಿಂದಾಗಿ ಗೇರು ಮತ್ತು ಮಾವು ಬೆಳೆಗಳ ಹೂವುಗಳು ಸುಟ್ಟಂತಾಗಿ ಬೆಳೆ ಕಡಿಮೆಯಾಗಿದೆ. ಅಡಿಕೆಗೆ ಸಿಂಗಾರ ಡೈಬ್ಯಾಕ್ ರೋಗ, ಬಂಜೆ ಸಿಂಗಾರ ಮತ್ತು ಬಂಜೆ ಹೂ ಉತ್ಪತ್ತಿಯಾಗಿ ಸಿಂಗಾರ ಒಣಗುವ ಪ್ರಮಾಣ ಜಾಸ್ತಿಯಾಗಿರುವುದು ಹೆಚ್ಚಿನ ತೋಟಗಳಲ್ಲಿ ಕಂಡು ಬಂದಿದೆ. ಆದ್ದರಿಂದ ರೈತರು ಮಳೆಗಾಲದಲ್ಲಿ ತೋಟದಲ್ಲಿ ಬಾಳೆ, ಸೂಜಿಮೆಣಸು, ಸುವರ್ಣಗಡ್ಡೆ, ಕಾಳುಮೆಣಸು, ಶುಂಠಿ, ಅರಿಶಿನ ಇತ್ಯಾದಿ ಉಪ ಬೆಳೆಗಳನ್ನು ತೋಟಗಳ ಪರಿಸ್ಥಿತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು, ಬೆಳೆಯುವುದರ ಮೂಲಕ ಆರ್ಥಿಕ ನಷ್ಟವನ್ನು ಕಡಿಮೆಗೊಳಿಸಿಕೊಳ್ಳಬಹುದು.

ಮುಂಗಾರಿನ ಅವಧಿಯಲ್ಲಿ ಕಡಿಮೆ ಮಳೆ ಸುರಿಯುವ ಮತ್ತು ಮಳೆಗಾಲದ ಪ್ರಾರಂಭ ತಡವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ಬೇಸಿಗೆಯಲ್ಲಿ ಕಂಡು ಬಂದಿರುವ ರೋಗ-ಕೀಟಗಳನ್ನು ನಿಯಂತ್ರಿಸುವುದು ಮತ್ತು ಮಳೆಗಾಲದ ಪೂರ್ವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಅಡಿಕೆ ಗಿಡಗಳ ಎಲೆಗಳಿಗೆ ಮೈಟ್ಸ್‌ ಕೀಟ ಸಮಸ್ಯೆ ಕಂಡು ಬಂದಲ್ಲಿ ಡಿಕೋಪಾಲ್ 2.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅಡಿಕೆಯಲ್ಲಿ ಎಲೆ ತುದಿಯಿಂದ ಒಣಗುವ ರೋಗ (ಲೀಪ್ ಬ್ಲೈಟ್) ಕಂಡುಬಂದಲ್ಲಿ ಕಾರ್ಬೆಂಡೆಂಜಿಂ 2 ಗ್ರಾಂ ಮತ್ತು ಮ್ಯಾಂಕೋಜೆಬ್ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಳುಮೆಣಸು ಬಳ್ಳಿಯಲ್ಲಿ ಹೊಸ ಕರೆಗಳು ಹೊರಡಲು ಪ್ರಾರಂಭವಾಗಿದ್ದರೆ, ಮಳೆಗಾಲ ಪ್ರಾರಂಭವಾಗುವವರೆಗೂ ನೀರಾವರಿ ಮುಂದುವರಿಸಬೇಕು. ಕಾಳುಮೆಣಸಿನ ಬಳ್ಳಿಯನ್ನು ಆಧಾರವಾಗಿರುವ ಮರಕ್ಕೆ ಕಟ್ಟಿ, ಬುಡಕ್ಕೆ ಮಣ್ಣೇರಿಸಬೇಕು. ಮಾವು ಮತ್ತು ಗೇರಿನ ಗಿಡಗಳಲ್ಲಿ ಕೊಯ್ಲಿನ ನಂತರ ಅನಗತ್ಯ ಟೊಂಗೆಗಳನ್ನು ಕತ್ತರಿಸಿ ತೆಗೆದು ಬೋರ್ಡೋ ಪೇಸ್ಟ್‌ ಹಚ್ಚಬೇಕು. ಮಳೆಗಾಲದ ಪ್ರಾರಂಭದಲ್ಲಿ ಎಲ್ಲ ಬೆಳೆಗಳಿಗೆ ಶಿಫಾರಸು ಮಾಡಿದ ಗೊಬ್ಬರಗಳನ್ನು ಹಾಕಬೇಕು ಎಂದು ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿ.ಎಂ.ಹೆಗಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT