ಮಾಲೂರು: ಪಟ್ಟಣದ ಪುರಾತನ ಶಂಕರನಾರಾಯಣಸ್ವಾಮಿ ದೇಗುಲದಲ್ಲಿ ಕಾಮನ ಪೌರ್ಣಮಿ ಅಂಗವಾಗಿ ಸ್ವಾಮಿಯ ರಥೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣದ ಹೃದಯ ಭಾಗದಲ್ಲಿರುವ ಶಂಕರ ನಾರಾಯಣಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಒಂಬತ್ತು ದಿನಗಳ ಸ್ವಾಮಿಯ ರಥೋತ್ಸವ ಕೈಂಕರ್ಯಗಳು ಪ್ರಧಾನ ಅರ್ಚಕ ಶ್ರೀನಿವಾಸ್ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿದವು.
ಧ್ವಜಾರೋಹಣದೊಂದಿಗೆ ಆರಂಭವಾಗಿ ಶೇಷವಾಹನೋತ್ಸವ, ವೃಷಭ ವಾಹನೋತ್ಸವ, ಗಿರಿಜ ಕಲ್ಯಾಣೋತ್ಸವ, ಪಾರ್ವತ್ಯುತ್ಸವ, ದ್ವಾದಶರಾಧನೆ, ಆಸ್ಥಾನ ಪೂಜಾ, ವಸಂತ್ಯುತ್ಸವ, ಶಯನೋತ್ಸವ ನಡೆಯಿತು.
ಕಾಮನ ಪೌರ್ಣಮಿ ಅಂಗವಾಗಿ ಗುರುವಾರ ಶಂಕರ ನಾರಾಯಣನ ಬ್ರಹ್ಮೋತ್ಸವದ ಕೈಂಕರ್ಯಗಳು ಮುಂಜಾನೆಯಿಂದಲೇ ಪ್ರಾರಂಭವಾಯಿತು. ಅಪಾರ ಭಕ್ತರೊಂದಿಗೆ ಮಧ್ಯಾಹ್ನ 12 ಘಂಟೆಗೆ ತಹಶೀಲ್ದಾರ್ ಗಿರೀಶ್ ಅವರ ಭಾಗಿತ್ವದಲ್ಲಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು. ಹರ ಹರ ಮಹಾದೇವ ಎಂದು ಭಕ್ತರು ಜಯ ಘೋಷಗಳನ್ನು ಪಠಿಸುತ್ತಿದ್ದಂತೆ ಶಂಕರನಾರಾಯಣಸ್ವಾಮಿಯ ರಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಟ್ಟಣದ 4ನೇ ವಾರ್ಡಿನ ಕುಪ್ಪಶೆಟ್ಟಿ ಬಾವಿ ಬಳಿ 2 ಗಂಟೆಗೆ ರಥವನ್ನು ನಿಲ್ಲಿಸಲಾಯಿತು. ನಂತರ ಸಂಜೆ ದೇವಾಲಯಕ್ಕೆ ರಥವು ಸೇರಿತು.
ಪಾನಕ, ಕೋಸುಂಬರಿ ಮತ್ತು ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.