ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಪಾರಂಪರಿಕ ವೃಕ್ಷವಾಗಿ ಕರಿ ಇಶಾಡ್‌

ಜಿಲ್ಲೆಯ ವಿಶಿಷ್ಟ ಮಾವಿನ ತಳಿಗೆ ಜಾಗತಿಕ ಮಟ್ಟದಲ್ಲಿ ಗುರುತು ನೀಡಲು ಆರಂಭಿಕ ಹೆಜ್ಜೆಗಳು
Last Updated 9 ಜುಲೈ 2020, 6:42 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ವಿಶಿಷ್ಟ ‘ಕರಿ ಇಶಾಡ್’ ಮಾವಿನ ತಳಿಯನ್ನು ‘ಪಾರಂಪರಿಕ ವೃಕ್ಷ’ ಎಂದು ರಾಜ್ಯಮಟ್ಟದಲ್ಲಿ ಗುರುತಿಸಲು ಅಂಕೋಲಾದಲ್ಲಿ ಪ್ರಯತ್ನಗಳು ಆರಂಭವಾಗಿವೆ.ತಾಲ್ಲೂಕು ಪಂಚಾಯ್ತಿಯ ಜೀವ ವೈವಿಧ್ಯ ಸಮಿತಿಯುಈ ಬಗ್ಗೆ ಮೊದಲ ಹೆಜ್ಜೆಗಳನ್ನಿಟ್ಟಿದೆ.

ತಳಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಲುಮತ್ತು ಸಂಪೂರ್ಣ ಅಭಿವೃದ್ಧಿಗೆ ವ್ಯವಸ್ಥಿತ ಕ್ರಮದ ಅಗತ್ಯವಿದೆ. ಅಲ್ಲದೇ ಸ್ಥಳೀಯ ತಳಿಯು ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ವಿಶೇಷತೆ ಇರಬೇಕು.ಈ ನಿಟ್ಟಿನಲ್ಲಿ ಅಂಕೋಲಾ ತಾಲ್ಲೂಕು ಪಂಚಾಯ್ತಿಯುಕರಿ ಇಶಾಡ್ ಮಾವಿನ ತಳಿಯನ್ನು ‘ಪಾರಂಪರಿಕ’ ಎಂದು ಘೋಷಿಸಿ ನಿರ್ಣಯ ತೆಗೆದುಕೊಂಡಿದೆ. ಅಲ್ಲದೇ ರಾಜ್ಯಜೀವ ವೈವಿಧ್ಯ ಮಂಡಳಿಯಿಂದಲೂ ಘೋಷಿಸುವಂತೆ ಪ್ರಸ್ತಾವ ಸಲ್ಲಿಕೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಪಿ.ವೈ.ಸಾವಂತ, ‘ಕರಿ ಇಶಾಡ್ ಮಾವಿನ ತಳಿಯು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಗಿದೆ.ಇದರ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲೂ ತಿಳಿಯಬೇಕು. ಅದಕ್ಕಾಗಿ ಪಾರಂಪರಿಕ ವೃಕ್ಷವೆಂದು ಘೋಷಿಸಿದ್ದೇವೆ. ನಾವು ಒಂದು ವಾರದ ಹಿಂದೆ ಹಮ್ಮಿಕೊಂಡ ಸಭೆಯಲ್ಲಿ ಮಂಡಳಿಯಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಉಪಸ್ಥಿತರಿದ್ದರು. ಹಾಗಾಗಿ ರಾಜ್ಯಮಟ್ಟದಲ್ಲೂ ನಮ್ಮ ಪ್ರಸ್ತಾವಕ್ಕೆ ಮನ್ನಣೆ ಸಿಗುವ ನಿರೀಕ್ಷೆಯಿದೆ’ ಎಂದು ಹೇಳಿದರು.

‘ಸ್ಥಳೀಯ ಮಟ್ಟದಲ್ಲಿ ಸ್ಥಳಗಳು, ತಳಿಗಳನ್ನುಗುರುತಿಸಿ, ಅವುಗಳಿಗೆ ಮನ್ನಣೆ ನೀಡುವ ಕಾರ್ಯವನ್ನುಕೇರಳ ಮೊದಲ ಬಾರಿಗೆ ಮಾಡಿತು. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಕೆಲವು ತಿಂಗಳ ಹಿಂದೆ ಸೋಂದಾದ ಮುಂಡಿಗೆ ಕೆರೆಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಪಾರಂಪರಿಕ ಎಂದು ಘೋಷಿಸಿದರು. ಅಂಕೋಲಾ ತಾಲ್ಲೂಕು ಪಂಚಾಯ್ತಿಯು ಜಿಲ್ಲೆಯಲ್ಲಿ ಈ ರೀತಿಯ ನಿರ್ಣಯ ಕೈಗೊಂಡ ಎರಡನೇ ಸ್ಥಳೀಯ ಆಡಳಿತವಾಗಿದೆ’ ಎಂದು ಅನಂತ ಹೆಗಡೆ ಅಶೀಸರ ಸಂತಸ ವ್ಯಕ್ತಪಡಿಸಿದರು.

‘ತಲತಲಾಂತರಗಳಿಂದ ಜೊತೆಗೆ ಬಂದ ತಳಿಗಳನ್ನು ಉಳಿಸಿ, ಬೆಳೆಸಿ ಅಭಿವೃದ್ಧಿ ಪಡಿಸುವುದು ಒಂದು ಭಾಗ. ಅದರೊಂದಿಗೇ ಅವುಗಳಬಗ್ಗೆ ಅಧ್ಯಯನ ಮಾಡಲು ಅಪಾರ ಅವಕಾಶಗಳಿವೆ. ತೋಟಗಾರಿಕೆ, ಅರಣ್ಯ ಇಲಾಖೆಯವರರು ತಮ್ಮ ನರ್ಸರಿಗಳಲ್ಲಿ ಬೆಳೆಸಬಹುದು. ಸ್ವ ಸಹಾಯ ಸಂಘಗಳು, ಶಾಲಾ ವನಗಳಲ್ಲಿ ನೆಡಬಹುದು. ವಸ್ತು ಪ್ರದರ್ಶನದ ಮಾದರಿಯಲ್ಲಿಹಣ್ಣಿನ, ಮರದ ಮಾಹಿತಿ ನೀಡಬಹುದು. ಹಾಗಾಗಿ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯವರು ನರ್ಸರಿಗಳಲ್ಲಿ ಇದನ್ನು ಬೆಳೆಸುವಂತೆ ಸೂಚನೆ ನೀಡಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.

ಏನು ಪ್ರಯೋಜನ?

‘ಪಾರಂಪರಿಕ ತಳಿ’ ಎಂಬ ಹೆಗ್ಗಳಿಕೆ ಪಡೆದುಕೊಳ್ಳುವುದರಿಂದ ಯಾವುದೇ ತಳಿಗಾದರೂ ಜಾಗತಿಕ ಮಟ್ಟದಲ್ಲಿ ಗುರುತು ಸಿಗುತ್ತದೆ. ರಾಜ್ಯದಲ್ಲಿ ಅಡಿಕೆ, ತೆಂಗು, ಮಲ್ಲಿಗೆ, ಅಪ್ಪೆಮಿಡಿ ಮುಂತಾದವುಗಳಿಗೆ ‘ಜಾಗತಿಕ ಗುರುತು’ (ಜಿ.ಐ ಇಂಡಿಕೇಟರ್) ಪಡೆದುಕೊಂಡ ಮಾದರಿಯಲ್ಲೇ ಕರಿ ಇಶಾಡ್ ಮಾವಿ‌ಗೂ ಪಡೆದುಕೊಳ್ಳುವ ಪ್ರಸ್ತಾವ ಸಲ್ಲಿಸಲು ಇದರಿಂದ ಅನುಕೂಲವಾಗಲಿದೆ. ಈ ಎಲ್ಲ ಕಾರ್ಯಕ್ಕೂ ಇದು ಪ್ರಾಥಮಿಕ ಪ್ರಕ್ರಿಯೆ ಆಗಲಿದೆ.

***

ಎಲ್ಲವನ್ನೂರಾಜ್ಯಮಟ್ಟದಲ್ಲಿ ಘೋಷಿಸುವುದು ಕಷ್ಟ. ಆದ್ದರಿಂದ ತಾಲ್ಲೂಕು ಮಟ್ಟದ ಘೋಷಣೆ ಮುಖ್ಯವಾಗುತ್ತದೆ. ಅಂಕೋಲಾ ತಾ.ಪಂ ಸಲ್ಲಿಸಿದ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತದೆ.

- ಅನಂತ ಹೆಗಡೆ ಅಶೀಸರ,ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT