ಕಾರವಾರ: ಜಿಲ್ಲೆಯಾದ್ಯಂತ ಶನಿವಾರ ದಿನವಡೀ ಅಬ್ಬರಿಸಿದ್ದ ಮಳೆಯು, ಭಾನುವಾರ ಕ್ಷೀಣಿಸಿದೆ. ಹಳ್ಳಗಳು ಉಕ್ಕೇರಿದ್ದ ಹೊನ್ನಾವರದ ಗುಂಡಬಾಳಾ, ಸಾಲ್ಕೋಡು ಸುತ್ತಮುತ್ತ ನೆರೆ ಇಳಿದಿದೆ.
ಹೊನ್ನಾವರ ತಾಲ್ಲೂಕಿನಲ್ಲಿ 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಆಶ್ರಯ ಪಡೆದಿದ್ದ ಜನರು ತಮ್ಮ ಮನೆಗಳಿಗೆ ಹೋಗಿದ್ದಾರೆ.
ಮುಂಡಗೋಡ ತಾಲ್ಲೂಕಿನಲ್ಲಿ ಭಾನುವಾರ ಬೆಳಗಿನವರೆಗೂ ರಭಸದ ಮಳೆಯಾಗಿದೆ. ಸದ್ಯ ಬಿಡುವು ನೀಡುತ್ತ ಮಳೆ ಮುಂದುವರಿದಿದೆ. ಕಾವಲಕೊಪ್ಪ ಹಾಗೂ ತುಂಬರಗಿ ಗ್ರಾಮಗಳಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಸತತ ಮಳೆಯಿಂದ ಗೋವಿನಜೋಳ ಬೆಳೆ ಹಾನಿಯಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರವಾರ, ಶಿರಸಿ, ಯಲ್ಲಾಪುರದಲ್ಲಿ ಮಳೆ ಕಡಿಮೆ ಆಗಿದೆ. ಜೊಯಿಡಾದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುತ್ತಿದೆ.