ಕಾರವಾರ: ಬುದ್ಧಿಮಾಂದ್ಯ ಬಾಲಕಿಯ ಅತ್ಯಾಚಾರ ಎಸಗಿದ್ದ ಅಪರಾಧಿಗೆ, ಕಾರವಾರದ ಎಫ್.ಟಿ.ಎಸ್.ಸಿ. ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು, 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.
2020ರ ಡಿಸೆಂಬರ್ನಲ್ಲಿ ಪ್ರಕರಣ ನಡೆದಿತ್ತು. ಯಲ್ಲಾಪುರ ಠಾಣೆಯ ಅಂದಿನ ಸಿ.ಪಿ.ಐ. ಸುರೇಶ ಎಚ್.ಯಳ್ಳೂರು ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿಯ ವಿರುದ್ಧ ‘ಪೊಕ್ಸೊ’ ಕಾಯ್ದೆಯಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆದೇಶಿಸಿದ್ದಾರೆ.
ನ್ಯಾಯಾಧೀಶರು ಒಂದೂವರೆ ವರ್ಷಗಳ ಅವಧಿಯಲ್ಲಿ ನೀಡಿದ 39ನೇ ಶಿಕ್ಷೆ ಇದಾಗಿದೆ. ಸರ್ಕಾರದ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಸುಭಾಷ ಪಿ.ಕೈರನ್ನ ಅವರ 50ನೇ ಯಶಸ್ವಿ ವಾದ ಮಂಡನೆಯ ಪ್ರಕರಣವೂ ಇದಾಗಿದೆ ಎಂಬುದು ಗಮನಾರ್ಹ.