ಕಾರವಾರ:ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಅಂಕೋಲಾ ತಾಲ್ಲೂಕಿನ ಬಾಸಗೋಡ ಗ್ರಾಮದಲ್ಲಿ ‘ಕೃಷಿ ಹಬ್ಬ’ಎಂಬ ವಿಭಿನ್ನ ಕಾರ್ಯಕ್ರಮವು ಶನಿವಾರ ನಡೆಯಿತು.
ಆಧುನಿಕತೆಯ ಮೋಡಿಗೆ ಸಿಲುಕಿ ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವವರಿಗೆ,ಅನುಕೂಲವಿದ್ದರೂಕೃಷಿ ಮಾಡದವರನ್ನು ಹಾಗೂ ಯುವಕರನ್ನು ವ್ಯವಸಾಯದತ್ತ ಆಕರ್ಷಿಸುವಉದ್ದೇಶದಿಂದಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜ್ಞಾನಸತ್ರ ವೇದಿಕೆಯುಒಂಬತ್ತುವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ.
ಬಾಸಗೋಡದ ಸರಯೂ ಬನದಲ್ಲಿಆಯೋಜನೆಗೊಂಡಿದ್ದ ಈ ಕಾರ್ಯಕ್ರಮಕ್ಕೆಆರ್ಎಸ್ಎಸ್ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಎತ್ತುಗಳನ್ನು ಹಿಡಿದು ಗದ್ದೆ ಹೂಳುವ ಮೂಲಕ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಗಣ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರೂಉಳುಮೆ ಮಾಡಿದ ಕೆಸರು ಗದ್ದೆಯಲ್ಲಿ ಭತ್ತದ ಸಸಿಯನ್ನು ನೆಟ್ಟರು.
ಪ್ರಶಸ್ತಿ ಪ್ರದಾನ: ಯುವ ಕೃಷಿಕ ಗಣೇಶ್ ನೆವರೇಕರ್ ಅವರಿಗೆ ‘ಕೃಷಿ ಭೀಮ’ ಪ್ರಶಸ್ತಿಪ್ರದಾನ ಮಾಡಲಾಯಿತು.ಕೃಷಿಕರಾದ ಕಮಲಾ ನಾಯ್ಕ ಶಿರಗುಂಜಿ, ನಾಗಮ್ಮ ಗೌಡ ಹೊನ್ನೆಬೈಲ್, ವೆಂಕಟ್ರಮಣ ನಾಯ್ಕ, ಕೃಷ್ಣ ಹೆಗಡೆ, ವೀರಪ್ಪ ಗೌಡ, ದಯಾನಂದ ಭಟ್ ಅವರ್ಸಾ, ಗಣಪತಿ ಗುನಗಿ, ದಾಮೋದರ್ ನಾಯಕ, ಚಂದ್ರಕಾಂತ ನಾಯಕ, ಯಾದು ಆಗೇರ್, ಹನುಮಂತ ನಾಯಕ, ಹೊನ್ನಪ್ಪ ನಾಯಕ ಅವರನ್ನೂ ಈ ವೇಳೆ ಗೌರವಿಸಲಾಯಿತು.
ಸಸಿಯೇ ಹೂಗುಚ್ಛ, ಕಂಬಳಿಯೇ ಶಾಲು: ಕಾರ್ಯಕ್ರಮದಲ್ಲಿ ಸ್ವಾಗತಿಸಲು ಹೂಗುಚ್ಛದಬದಲು ಭತ್ತದ ಸಸಿಯನ್ನು ನೀಡಲಾಯಿತು. ಕೃಷಿ ಸಾಧಕರಿಗೆ ಕಂಬಳಿಯನ್ನೇ ಶಾಲಿನಂತೆ ಹೊದಿಸಿ, ಸನ್ಮಾನಿಸಲಾಯಿತು. ಗಣ್ಯರಿಗೆ ಗಿಡಗಳನ್ನು ಈ ವೇಳೆ ನೀಡಲಾಯಿತು.
ಜ್ಞಾನಸತ್ರ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ,ಉದ್ಯಮಿಗಳಾದ ಎಂ.ಆರ್.ಶೆಟ್ಟಿ, ಪ್ರಕಾಶ್ ಕೌರ್, ಶ್ರೀಕಾಂತ್ ಶೆಟ್ಟಿ ಇದ್ದರು.
‘ಆರ್ಥಿಕ ಸಂಪನ್ಮೂಲದ ಅಭಿವೃದ್ಧಿ ಯಶಸ್ಸಲ್ಲ’:‘ದೇಶ ಮುನ್ನಡೆಯುತ್ತಿದೆ; ಅಭಿವೃದ್ಧಿಯತ್ತ ಹೋಗುತ್ತಿದೆ ಎಂದುಅನೇಕರುಹೇಳುತ್ತಾರೆ. ಆರ್ಥಿಕ ಸಂಪನ್ಮೂಲವನ್ನು ಬೆಳೆಸುವುದೇ ಅಭಿವೃದ್ಧಿಯಮೂಲವಾದರೆ ಅದು ಯಶಸ್ಸಿನ ನಡೆ ಅಲ್ಲ’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ ಒಂದು ಚಿಂತನೆ, ಸಂಸ್ಕೃತಿ ಇದೆ. ಋಷಿ ಹಾಗೂ ಕೃಷಿ ಸಂಸ್ಕೃತಿ ಎಂಬ ಎರಡು ಸಂಸ್ಕೃತಿಗಳ ಮೇಲೆಯೇ ದೇಶ ಸಹಸ್ರಾರು ವರ್ಷಗಳಿಂದ ಬದುಕಿ ಬಂದಿದೆ. ಇವೆರಡೂ ಅನಿವಾರ್ಯ ಭಾಗಗಳು. ದೇಹದ ಆತ್ಮ ಋಷಿ, ದೇಹವೇ ಕೃಷಿ. ಇವೆರಡೂ ಇಲ್ಲದೆಬದುಕೇ ಇಲ್ಲ. ಬದುಕು ಹಣದಿಂದ ಆಗಲ್ಲ. ನೋಟು, ನಾಣ್ಯವನ್ನು ತಿನ್ನಲು ಆಗುವುದಿಲ್ಲ. ಕೃಷಿಕರ ಸಾಧನೆಯ ಮೇಲೆ ನಮ್ಮ ಜೀವನ ನಿಂತಿದೆ’ ಎಂದರು.
‘ಆಟ ಆಟವಾಗಿಯೇ ಉಳಿದಿಲ್ಲ’: ‘ಆರ್ಎಸ್ಎಸ್ನ ಶಾಖೆಯಲ್ಲಿ ಒಂದು ಆಟ ಆಡಿಸುತ್ತಿದ್ದೆವು. ಮಧ್ಯದಲ್ಲಿ ಒಬ್ಬ ನಿಂತು, ಅವನನ್ನು ಕಾರ್ಯಕರ್ತರು ಸುತ್ತುವರಿಯುತ್ತಿದ್ದರು. ಈ ವೇಳೆ, ‘ಕಾಶ್ಮೀರ್ ಕಿಸ್ ಕಾ ಹೈ?’ (ಕಾಶ್ಮೀರ ಯಾರದ್ದು) ಎಂದುಮಧ್ಯದಲ್ಲಿ ನಿಂತವನು ಹೇಳುತ್ತಿದ್ದ. ಸುತ್ತಇದ್ದವರು, ‘ಕಾಶ್ಮೀರ್ ಹಮಾರಾ ಹೈ’ (ಕಾಶ್ಮೀರ ನಮ್ಮದು) ಎಂದು ಒಮ್ಮೆಲೆ ಒಳ ನುಗ್ಗುತ್ತಿದ್ದರು...’
‘ಈ ಆಟವನ್ನು ಆಡಿದ ನರೇಂದ್ರ ಮೋದಿ, ಅಮಿತ್ ಷಾ ಅದನ್ನು ಆಟವಾಗಿಯೇ ಉಳಿಯಲು ಬಿಡಲಿಲ್ಲ. ಕಾಶ್ಮೀರಿಗಳಿಗೆ ಪಾಠವನ್ನಾಗಿ ಮಾಡಿ, ಅದನ್ನು ಭಾರತದೊಂದಿಗೆ ವಿಲೀನ ಮಾಡಿದರು. ಈ ಬಾರಿಯ ಸ್ವಾತಂತ್ರ್ಯೋತ್ಸವ– ರಕ್ಷಾಬಂಧನ ಒಟ್ಟಿಗೆ ಬಂದಿರುವುದು ಭಾರತದಲ್ಲಿ ಕಾಶ್ಮೀರವನ್ನು ಜೋಡಿಸಿದ ಶುಭ ದಿನ’ ಎಂದುಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.