ಅಂಕೋಲಾ: ‘ಸಮಾಜದಲ್ಲಿ ಸಮಾನತೆ ಅತ್ಯಗತ್ಯ. ಎಂಜಿನಿಯರ್ ಆಗಿ ಕೃಷಿಯಲ್ಲಿ ತೊಡಗಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿದ್ದೇನೆ. ಶ್ರೀಗಂಧ ಮರ ಬೆಳೆಸುವ ಜೊತೆಗೆ ಹಲವು ತಳಿಗಳ ಗಿಡಗಳನ್ನು ಬೆಳೆಸಿದ್ದೇನೆ. ಯುವಕರು ಶ್ರೀಗಂಧ ಮರ ಬೆಳೆಸುವುದಾದರೆ ನಾನು ಅವರಿಗೆ ಮಾರ್ಗದರ್ಶನ ನೀಡುತ್ತೇನೆ’ ಎಂದು ರಾಯಚೂರಿನ ಶ್ರೀಗಂಧದ ಬೆಳೆಗಾರ್ತಿ ಕವಿತಾ ಮಿಶ್ರ ಹೇಳಿದರು.
ತಾಲ್ಲೂಕಿನ ಬಾಸಗೋಡ ಸರಯೂ ಬನದಲ್ಲಿ ವಕೀಲ ನಾಗರಾಜ ನಾಯಕ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಹಬ್ಬದಲ್ಲಿ ಅವರು, ‘ಕೃಷಿಭೀಮ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ‘ಯುವಕರು ಆಧುನಿಕತೆಯ ಮೋಹದಿಂದ ಕೃಷಿ ಚಟವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಕೃಷಿಗೆ ಅಗತ್ಯ ಅವಕಾಶವಿದ್ದರೂ ಕೃಷಿ ಮೇಲಿನ ಒಲವು ಕಡಿಮೆಯಾಗುತ್ತಿದೆ. ಕೃಷಿ ಉತ್ತೇಜನ ನೀಡುವ ಸಲುವಾಗಿ ಕೃಷಿ ಹಬ್ಬ ಆಯೋಜಿಸಿರುವುದು ಮಹತ್ವವಾಗಿದೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಭಾನು ಪ್ರಕಾಶ, ಬೆಂಗಳೂರು ನಾಡವರ ಸಂಘದ ಉತ್ತರ ಕನ್ನಡ ಘಟಕದ ಅಧ್ಯಕ್ಷ ಅರವಿಂದ ನಾಯಕ, ನಾಟಿ ವೈದ್ಯ ಹನುಮಂತ ಗೌಡ, ತಾಲ್ಲೂಕು ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ್, ದೇವರಾಯ ನಾಯಕ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ತುಳಸಿ ಗೌಡ, ಉಮೇಶ ಗೌಡ, ಬಿಂದೇಶ ನಾಯಕ ಹಿಚ್ಕಡ, ಗಣೇಶ ನಾಯ್ಕ ಬೊರಹಳ್ಳಿ ಇವರಿಗೆ ಕಂಬಳಿ ಹೊದಿಸಿ ಗೌರವಿಸಲಾಯಿತು.
ವಕೀಲ ನಾಗರಾಜ ನಾಯಕ ಸ್ವಾಗತಿಸಿದರು. ರಾಜೇಶ ಮಾಸ್ತರ ನಿರ್ವಹಿಸಿದರು. ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಪ್ರಮುಖರಾದ ರಾಮಚಂದ್ರ ಹೆಗಡೆ, ಯೋಗೇಶ ನಾಯಕ ಬಾಸಗೋಡ, ಜಿ.ಆರ್.ತಾಂಡೇಲ್, ಗಣಪತಿ ನಾಯಕ, ಜಯಪ್ರಕಾಶ ನಾಯಕ ಇದ್ದರು.