ಕಾರವಾರ: ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಸಿರಿಬಾಗಿಲು ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣಗಳಸಮೀಪ ಹಳಿಗಳ ಮೇಲೆ ಮಣ್ಣು ಕುಸಿದಿದೆ. ಆದ್ದರಿಂದ ಆ.8ರಂದು ಸಂಚರಿಸಬೇಕಾದ ಕಾರವಾರ–ಯಶವಂತಪುರ ರೈಲು (16516) ಸಂಚಾರವನ್ನು ರದ್ದು ಮಾಡಲಾಗಿದೆ.
ಇದೇರೀತಿ, ಯಶವಂತಪುರದಿಂದ ಕಾರವಾರಕ್ಕೆ ಬುಧವಾರ ಬರಬೇಕಿದ್ದ ರೈಲು (16515) ಸಂಚಾರವೂ ರದ್ದಾಗಿದೆ. ಅಂತೆಯೇಬುಧವಾರ ಸಂಚರಿಸುತ್ತಿದ್ದ ಕಾರವಾರ– ಬೆಂಗಳೂರು ಎಕ್ಸ್ಪ್ರೆಸ್ (16514) ರೈಲನ್ನು ಭಾಗಶಃ ರದ್ದು ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸೂಪಾ ಜಲಾಶಯಕ್ಕೆ ಭಾರಿ ಒಳಹರಿವು
ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹಾಗಾಗಿ ಅಣೆಕಟ್ಟೆಗೆ ಭಾರಿ ಒಳಹರಿವು ಬರುತ್ತಿದೆ.
ಇದೇರೀತಿ ನೀರಿನ ಹರಿವು ಹೆಚ್ಚಾದರೆ ಅಣೆಕಟ್ಟೆಯು ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಕ್ಷಣದಲ್ಲೂ ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮವು ಎರಡನೇ ಎಚ್ಚರಿಕೆಯನ್ನು ನೀಡಿದೆ.
564 ಮೀಟರ್ ಎತ್ತರದ ಜಲಾಶಯದಲ್ಲಿ ಬುಧವಾರ ಸಂಜೆ 6 ಗಂಟೆಯ ವೇಳೆಗೆ 554.80 ಮೀಟರ್ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಕೆಳಭಾಗದಲ್ಲಿ, ನದಿಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜಾನುವಾರು ಜೊತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚಿಸಿದೆ.