ಮುಂಡಗೋಡ: ಯಲ್ಲಾಪುರ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷ ಬಿಟ್ಟು ಹೋದ ಕೆಲವರು ಮರಳಿ ಬರಲು ತಯಾರಾಗಿದ್ದಾರೆ. ಪಕ್ಷ ಬಿಟ್ಟು ಹೋದವರಿಗೆ ಆ ಪಕ್ಷದಲ್ಲಿ ಅಧಿಕಾರ ಸಿಕ್ಕಿರಬಹುದು, ಆದರೆ ಗೌರವ ಸಿಕ್ಕಿಲ್ಲ. ಇದರಿಂದ ಮನನೊಂದು ಕಾಂಗ್ರೆಸ್ ಪಕ್ಷಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದರು.
ಭಾನುವಾರ ನಡೆದ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಧಾನಪರಿಷತ್ ಚುನಾವಣಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಜ ಸ್ಪಧಿ೯ಸಿದ್ದಾರೆ. ನಿಮ್ಮ ಮತದ ಜೊತೆಗೆ ಬೇರೆ ಪಕ್ಷದ ಸದಸ್ಯರ ಮನವೊಲಿಸಿ ಅವರಿಂದಲೂ, ಪಕ್ಷದ ಅಭ್ಯರ್ಥಿಗೆ ಮತ ಹಾಕಿಸಬೇಕೆಂದು ಮನವಿ ಮಾಡಿದರು.
ಬೇರೆ ಪಕ್ಷದ ಬಗ್ಗೆ ಮಾತನಾಡುವ ಮೊದಲು, ಕಾಂಗ್ರೆಸ್ ಪಕ್ಷದ ಸೈನ್ಯ ಗಟ್ಟಿಯಾಗಿಟ್ಟುಕೊಳ್ಳೋಣ. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪಕ್ಷದ ಕಾರ್ಯಕ್ರಮಗಳಲ್ಲಿ ಅಶಿಸ್ತು ಸಹಿಸುವುದಿಲ್ಲ. ಪಕ್ಷದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಎಲ್ಲ ಚುನಾವಣೆಗಳನ್ನು ಗೆಲ್ಲಬಹುದು ಎಂದರು.
ತಾಲ್ಲೂಕಿನಲ್ಲಿ 20-20 ಯೋಜನೆಯಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಯಾವ ಯೋಜನೆ ಎಂದರೆ ಕಾಮಗಾರಿ ಮಾಡುವಾಗ ಶೇ 20 ಕಮಿಷನ್ ಕೊಡುವ ಯೋಜನೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಂದೆ ನಡೆಯುವ ಪ್ರತಿಯೊಂದು ಚುನಾವಣೆಯೂ ಹಣ ಹಾಗೂ ಗುಣದ ಮೇಲೆ ನಡೆಯಲಿದ್ದು, ಕೊನೆಗೆ ಗುಣವೇ ಗೆಲ್ಲಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡರಾದ ರಾಮಕೃಷ್ಣ ಮೂಲಿಮನಿ, ಎಚ್.ಎಂ.ನಾಯ್ಕ, ಧಮ೯ರಾಜ ನಡಗೇರ, ರಾಜು ಭೋವಿ, ಶಾರದಾ ರಾಠೋಡ, ಪ.ಪಂ.ಸದಸ್ಯರುಗಳು ಇದ್ದರು.