ಶಿರಸಿ: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾನಗೋಡದಲ್ಲಿ 2018ರ ಫೆಬ್ರುವರಿ 8ರಂದು ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 25ಸಾವಿರ ವಿಧಿಸಿ, ಆದೇಶಿಸಿದೆ. ಕಾನಗೋಡಿನ ರೇಣುಕಾ ನಾಯ್ಕ ಮತ್ತು ರವಿ ನಾಯ್ಕ ಅವರ ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಸಿದ್ದಾಪುರ ಕಾನಗೋಡ ನಿವಾಸಿಗಳಾದ ಗಣಪತಿ ನಾಯ್ಕ, ಪವನ ನಾಯ್ಕ, ಪ್ರಸಾದ ನಾಯ್ಕ ಹಾಗೂ ಪೃಥ್ವಿ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು, ಈ ಆದೇಶ ಮಾಡಿದ್ದಾರೆ.