ಕಾರವಾರ: ಕೋವಿಡ್ 19 ಪೀಡಿತ ರೋಗಿಯೊಬ್ಬರು (ಯು.ಕೆ.410) ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ವಾರ್ಡ್ನಲ್ಲಿ ಸೋಮವಾರ ಮೃತಪಟ್ಟರು. ಶಿರಸಿ ತಾಲ್ಲೂಕಿನ ಅವರಿಗೆ 42 ವರ್ಷವಾಗಿತ್ತು.
ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜುಲೈ 4ರಂದು ರಾತ್ರಿ 2.30ಕ್ಕೆ ಶಿರಸಿಗೆ ಬಂದ ಅವರಿಗೆಅವರಿಗೆ ಬೇಧಿ ಹಾಗೂ ಉಸಿರಾಟದ ಸಮಸ್ಯೆ ಕಂಡುಬಂದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 5ರಂದು ಅವರ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರುಕೋವಿಡ್ 19 ಸೋಂಕಿತರಾಗಿರುವುದು ಅಂದೇ ದೃಢಪಟ್ಟಿತ್ತು.
ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಪರೀಕ್ಷಿಸಿದಾಗಲೂ ಕೋವಿಡ್ ಪಾಸಿಟಿವ್ ಬಂದಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆಂದು ಕಾರವಾರಕ್ಕೆಕರೆದುಕೊಂಡು ಬರಲಾಗಿತ್ತು.
‘ಅವರನ್ನು ಮಧ್ಯಾಹ್ನ 1 ಗಂಟೆಗೆ ಕೋವಿಡ್ ವಾರ್ಡ್ಗೆ ದಾಖಲಿಸಲಾಗಿತ್ತು. ಶಿಷ್ಟಾಚಾರದಂತೆಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ,ಉಸಿರಾಟದ ತೀವ್ರ ತೊಂದರೆಗೆ ಒಳಗಾಗಿ ಮಧ್ಯಾಹ್ನ 3.30ಕ್ಕೆ ಮೃತಪಟ್ಟರು’ ಎಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕೋವಿಡ್ 19ನಿಂದ ಜಿಲ್ಲೆಯಲ್ಲಿ ಮೃತಪಟ್ಟ ಎರಡನೇ ಸೋಂಕಿತ ಇವರಾಗಿದ್ದಾರೆ. ಕೆಲವು ದಿನಗಳ ಹಿಂದೆ ಯಲ್ಲಾಪುರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
12 ಮಂದಿ ಗುಣಮುಖ:ಕೋವಿಡ್ 19ನಿಂದ 12 ಮಂದಿ ಗುಣಮುಖರಾಗಿದ್ದು, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ಅವರ ಪೈಕಿ ಶಿರಸಿ ತಾಲ್ಲೂಕಿನ ಐವರು, ಕಾರವಾರ, ಭಟ್ಕಳ ತಾಲ್ಲೂಕುಗಳ ತಲಾ ಇಬ್ಬರು, ಮುಂಡಗೋಡ, ಜೊಯಿಡಾ ಹಾಗೂ ದಾಂಡೇಲಿ ತಾಲ್ಲೂಕಿನ ತಲಾ ಒಬ್ಬರಿದ್ದಾರೆ.