ಶಿರಸಿ: ಮಾರಿಕಾಂಬಾ ದೇವಿಯ ಜಾತ್ರೆಯ ಪೂರ್ವ ದಿಕ್ಕಿನ ಕೊನೆಯ ಹೊರಬೀಡು ಮಂಗಳವಾರ ರಾತ್ರಿ ನಡೆದಿದ್ದು ಬುಧವಾರ ದೇವಿ ವಿಗ್ರಹ ವಿಸರ್ಜಿಸಲಾಯಿತು. ಹೀಗಾಗಿ ದೇವಸ್ಥಾನದ ಗರ್ಭಗುಡಿಯ ಬಾಗಿಲು ಬುಧವಾರ ಮಧ್ಯಾಹ್ನ ಮುಚ್ಚಲಾಯಿತು.
ಜಾತ್ರೆಗೆ ಮುನ್ನ ನಡೆಯುವ ಧಾರ್ಮಿಕ ವಿಧಿವಿಧಾನಗಳ ಭಾಗವಾಗಿ ದೇವಿಯ ವಿಗ್ರಹವನ್ನು ಕಳಚಲಾಯಿತು. ದೇವಿ ಪ್ರತಿಷ್ಠಾಪನೆಗೊಳ್ಳುವ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಗೆ ಮೇಟಿ ದೀಪ ಒಯ್ದು ಅಲ್ಲಿ ಪಲ್ಲಕ್ಕಿಗೆ ಪೂಜೆ ಸಲ್ಲಿಸಲಾಯಿತು.
ಗದ್ದುಗೆ ಆವರಣದಲ್ಲಿ ಕಲಶ ಪ್ರತಿಷ್ಠಾಪನೆ ಮಾಡಿ ಅಂಕೆ ಹಾಕುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾರಿಕೋಣ ಮಹಿಷನಿಗೆ ಅಭ್ಯಂಜನ ಮಾಡಿಸಿ ಪೂಜೆ ಸಲ್ಲಿಸಲಾಯಿತು. ದೇವಸ್ಥನದ ಧರ್ಮದರ್ಶಿ ಮಂಡಳದವರು, ಬಾಬುದಾರರು, ಭಕ್ತರು ಇದ್ದರು.