ಶಿರಸಿ: ಮಾರಿಕಾಂಬಾ ದೇವಿಯನ್ನು ಜಾತ್ರಾ ಗದ್ದುಗೆಗೆ ಕರೆದೊಯ್ಯುವ ರಥ ನಿರ್ಮಾಣ ಪ್ರಕ್ರಿಯೆ ತಾರಿಮರದ ತುಂಡುಗಳಿಗೆ ಮಂಗಳವಾರ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಂಡಿತು.
ಮಾ.4 ರಂದು ಎಸಳೆ ಗ್ರಾಮದಲ್ಲಿ ರಥ ನಿರ್ಮಾಣಕ್ಕೆ ಬಳಸುವ ಮರಕ್ಕೆ ಕಚ್ಚು ಹಾಕಿ ತುಂಡರಿಸಲಾಗಿತ್ತು. ಮರದ ತುಂಡುಗಳನ್ನು ಸಂಪ್ರದಾಯಬದ್ಧವಾಗಿ ಬಾಬುದಾರರು ಎತ್ತಿನಬಂಡಿಯ ಮೂಲಕ ಮೆರವಣಿಗೆಯಲ್ಲಿ ಕರೆತಂದರು.
ಸಿಂಗಾರಗೊಂಡಿದ್ದ ಎತ್ತುಗಳು ಬಂಡಿಯಲ್ಲಿ ಇಡಲಾಗಿದ್ದ ಮರದ ತುಂಡುಗಳನ್ನು ಎಳೆದು ತಂದವು. ಅವುಗಳಿಗೆ ದೇವಸ್ಥಾನದ ಎದುರು ಪೂಜೆ ಸಲ್ಲಿಸಲಾಯಿತು. ಬಳಿಕ ಮರವನ್ನು ರಥ ಸಿದ್ಧಪಡಿಸುವ ಸಲುವಾಗಿ ಬಡಗಿಗಳಿಗೆ ಹಸ್ತಾಂತರಿಸಲಾಯಿತು.
ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ, ಉಪಾಧ್ಯಕ್ಷ ಸುಧೀಶ ಜೋಗಳೆಕರ, ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಪ್ರಮುಖರು, ಭಕ್ತರು ಇದ್ದರು.