ಶಿರಸಿ: ಇಲ್ಲಿನ ಕಸ್ತೂರಬಾ ನಗರದ ಮಸ್ಜಿದ್–ಎ–ನೂರ್ ಮತ್ತು ಮತ್ತು ಮಸ್ಜಿದ್–ಎ–ಗರೀಬ ನವಾಜ ಸರಹದ್ದು ಗುರುತಿಸಲು ವಾರ್ಡ್ ನಂ.17,18 ಮತ್ತು 20ರ ವ್ಯಾಪ್ತಿಯ ಈ ಮಸೀದಿ ವ್ಯಾಪ್ತಿಗೊಳಪಡುವ ಜನರ ಅಭಿಪ್ರಾಯವನ್ನು ಮತದ ಮೂಲಕ ಸಂಗ್ರಹಿಸಲು ನಿರ್ಣಯಿಸಲಾಯಿತು.
ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳ ನೇತೃತ್ವದಲ್ಲಿ ಜವಳಿ ಹಾಲ್ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎರಡೂ ಮಸೀದಿಗಳ ಸರಹದ್ದು ಅಂತಿಮಗೊಳಿಸಲು ಒಮ್ಮತದ ಅಭಿಪ್ರಾಯ ವ್ಯಕ್ತವಾಗಲಿಲ್ಲ.
ವಕ್ಪ್ ಬೋರ್ಡ್ ಅಧಿಕಾರಿ ಇಸ್ಮಾಯಿಲ್ ಮಾತನಾಡಿ, ‘ಎರಡು ಮಸೀದಿಗೂ ಒಂದೇ ಆಡಳಿತ ಮಂಡಳಿ ಇತ್ತು. ವಕ್ಫ್ ನಿಯಮಗಳ ಪ್ರಕಾರ ಒಂದು ಮಸೀದಿಗೆ ಸದಸ್ಯರಾದವರು ಇನ್ನೊಂದರಲ್ಲಿ ಸದಸ್ಯತ್ವ ಪಡೆಯಲು ಆಗದು. ಹೀಗಾಗಿ, ಎರಡೂ ಮಸೀದಿಗಳ ಗಡಿ ಗುರುತಿಸಿಕೊಳ್ಳಬೇಕು’ ಎಂದರು.
ಮಸ್ಜಿದ್–ಎ–ನೂರ್ ಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕಾದರೆ ಮೊದಲ ಗಡಿ ನಿರ್ಣಯಿಸಬೇಕಾಗುತ್ತದೆ. ಆ ಬಳಿಕ ನಿಯಮಾವಳಿಯಂತೆ ಮಂಡಳಿ ಆಯ್ಕೆ ನಡೆಯುತ್ತದೆ’ ಎಂದರು.
ಸಭೆಯಲ್ಲಿ ಪರ–ವಿರೋಧದ ಕುರಿತು ಅಭಿಪ್ರಾಯಗಳು ವ್ಯಕ್ತವಾದವು. ಎರಡೂ ಮಸೀದಿಗಳ ನೋಂದಣಿ ಪ್ರತ್ಯೇಕವಿದೆ. ಆಡಳಿತ ಮಂಡಳಿ ರಚಿಸುವ ಮುನ್ನ ಬೈಲಾ ರಚನೆಯಾಗಬೇಕು. ಆದರೆ ಬೈಲಾ ರಚನೆಗೆ ಸಾರ್ವಜನಿಕರ ಸಭೆ ಕರೆಯುವಂತೆ ನಿರ್ದೇಶನ ಬಂದಿದ್ದರೂ ಅಧಿಕಾರಿಗಳು ಸಭೆ ನಡೆಸಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ನಗರಸಭೆ ಸದಸ್ಯ ಖಾದರ ಆನವಟ್ಟಿ, ನೂರ್ ಅಹಮದ್ ಕನವಳ್ಳಿ, ಶಫಿ ಮುಲ್ಲಾ,ಇತರರಿದ್ದರು.