ಶಿರಸಿ: ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗೆ ನೀಡಿರುವ ತೀರ್ಪಿಗೆ ಸಂಬಂಧಿಸಿ, ಕೇಂದ್ರ ಸರ್ಕಾರ ಪುನರ್ ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಬೇಕು ಮತ್ತು ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ, ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ‘ಸುಪ್ರೀಂ ಕೋರ್ಟ್ ಆಗಲಿ ಅಥವಾ ಬೇರೆ ಯಾವುದೇ ರೀತಿಯಿಂದಲೂ ಸಂವಿಧಾನದ ಆಶಯ ಬದಲು ಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿದ ಸಂಗತಿಯಾಗಿದೆ. ಉದ್ಯೋಗವನ್ನು ಮೂಲಭೂತ ಹಕ್ಕಿನಂತೆ ಪಡೆಯಬಹುದು ಎಂದು ಸಂವಿಧಾನ ಹೇಳಿರುವಾಗ ಕೋರ್ಟ್ ತೀರ್ಪಿನ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಪರಿಶಿಷ್ಟ ಸಮದಾಯಗಳಿಗೆ ಅನ್ಯಾಯವಾಗುತ್ತದೆ. ಆ ಕಾರಣಕ್ಕಾಗಿ ತುರ್ತಾಗಿ ಕೇಂದ್ರ ಸರ್ಕಾರ ತೀರ್ಪನ್ನು ಮರು ಪರಿಶೀಲಿಸುವಂತೆ ಮನವಿ ಸಲ್ಲಿಸುವಂತೆ ರಾಷ್ಟ್ರಪತಿ ಸೂಚನೆ ನೀಡಬೇಕು ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ, ಪ್ರಮುಖರಾದ ಅಬ್ಬಾಸ್ ತೋನ್ಸೆ, ಶೈಲೇಶ ಜೋಗಳೇಕರ್, ಪ್ರಸನ್ನ ಶೆಟ್ಟಿ, ಜಬಿವುಲ್ಲಾ ಖಾನ್, ಗೀತಾ ಭೋವಿ, ಭೀಮಪ್ಪ ಭೋವಿವಡ್ಡರ್, ಜಯಾ ನಾಯ್ಕ, ನಜೀರ್ ಮೂಡಿ, ಅಮರ ನೇರಲಕಟ್ಟೆ, ರುಬೇಕಾ ಫನಾರ್ಂಡಿಸ್ ಇದ್ದರು.