ಕುಮಟಾ: ಲಾಕ್ಡೌನ್ ಕಾರಣದಿಂದ ಪಟ್ಟಣಕ್ಕೆ ಬರಲಾಗದ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶಾಸಕ ದಿನಕರ ಶೆಟ್ಟಿ ಭಾನುವಾರ ಉಚಿತವಾಗಿ ತರಕಾರಿ ವಿತರಿಸಿದರು.
ತಾಲ್ಲೂಕಿನ ಮೂರೂರು, ಕಲ್ಲಬ್ಬೆ, ಕರ್ಕಿಮಕ್ಕಿ, ಕುಡುವಳ್ಳಿ, ಬೊಗರಿಬೈಲ ಗ್ರಾಮಗಳ ಸುಮಾರು350 ಕುಟುಂಬಗಳಿಗೆ ಬಸಳೆ, ತೊಂಡೆಕಾಯಿ, ಸಿಹಿಗೆಣಸು, ಹಸಿಮೆಣಸು, ಬದನೆಕಾಯಿ ಸೇರಿ ಸುಮಾರು ತಲಾ ₹ 200 ಮೌಲ್ಯದ ತರಕಾರಿಯನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಯಿತು.
‘ತಾಲ್ಲೂಕಿನ ಗೋಕರ್ಣ ಹಾಗೂ ತಂಡ್ರಕುಳಿಯಲ್ಲಿ ಹಾಲಕ್ಕಿ ಸಮಾಜದ ಮಹಿಳೆಯರು ತಾವು ಬೆಳೆದ ತರಕಾರಿಗಳನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಅವರು ಬೆಳೆದ ತರಕಾರಿ ಮಾರಾಟವಾಗದೇ ಜೀವನಕ್ಕೆ ತೊಂದರೆ ಉಂಟಾಗಿತ್ತು. ಅಲ್ಲದೇತರಕಾರಿ ಕೂಡ ವ್ಯರ್ಥವಾಗುತ್ತಿತ್ತು. ಅದನ್ನು ಖರೀದಿಸಿ ಅಗತ್ಯ ವಸ್ತುಗಳ ಬೇಡಿಕೆ ಇರುವ ಗ್ರಾಮಗಳಿಗೆ ಉಚಿತವಾಗಿ ಹಂಚಲಾಗಿದೆ. ಅದೇ ರೀತಿ ಪಟ್ಟಣದಲ್ಲಿ ಆದಾಯ ಇಲ್ಲದೆ ಕಷ್ಟದಲ್ಲಿರುವ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ದಿನದಿ ವಸ್ತುಗಳ ಪ್ಯಾಕೇಟ್ಗಳನ್ನು ಉಚಿತವಾಗಿ ವಿತರಿಸಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಮಾಹಿತಿ ನೀಡಿದರು.