ಕಾರವಾರ: ನಗರದಾದ್ಯಂತ ಮಂಗಳವಾರ ಸಂಭ್ರಮದಿಂದ ನಾಗರ ಪಂಚಮಿಯನ್ನು ಆಚರಿಸಲಾಯಿತು. ವಿವಿಧ ನಾಗರ ಕಟ್ಟೆಗಳು, ವಿಗ್ರಹಗಳಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ನಂದನಗದ್ದಾದ ನಾಗನಾಥ ದೇವಸ್ಥಾನಕ್ಕೆ ನೂರಾರು ಭಕ್ತರು ಭೇಟಿ ನೀಡಿದ್ದರು. ಜಿಟಿಜಿಟಿ ಮಳೆಯಲ್ಲೇ ಸಾಲಾಗಿ ನಿಂತು ದೇವರ ವಿಗ್ರಹಕ್ಕೆ ಹಾಲು ಅಭಿಷೇಕ ಮಾಡಿದರು. ಹರಕೆ ಹೇಳಿಕೊಂಡವರು ವಿಶೇಷ ಪೂಜೆಗಳಲ್ಲಿ ಭಾಗಿಯಾದರು. ಕೋಡಿಬಾಗ ರಸ್ತೆಯಲ್ಲಿರುವ ಬ್ರಹ್ಮದೇವ ದೇವಸ್ಥಾನದ ಬಳಿಯ ನಾಗನಕಟ್ಟೆಗೂ ಭಕ್ತರು ಕ್ಷೀರಾಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು.
ಹಬ್ಬದ ಅಂಗವಾಗಿ ಮನೆಗಳಲ್ಲಿ ಅರಿಶಿಣದ ಎಲೆಯಲ್ಲಿ ವಿಶೇಷ ಖಾದ್ಯವನ್ನು ಮಾಡಿ ದೇವರಿಗೆ ನೈವೇದ್ಯ ಮಾಡಲಾಯಿತು. ಮನೆ ಮಂದಿ ಪ್ರಸಾದವಾಗಿ ಸ್ವೀಕರಿಸಿದರು.