ಶಿರಸಿ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ನಾಗಪಂಚಮಿ ಆಚರಣೆ ನಡೆಯಿತು. ನರೇಬೈಲಿನಲ್ಲಿ ಜೀವಂತ ಹಾವಿಗೆ ಪೂಜಿಸುವ ಮೂಲಕ ಹಬ್ಬದ ಆಚರಣೆ ನಡೆಯಿತು.
ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಜೀವಂತ ನಾಗರಹಾವಿಗೆ ಪೂಜೆ ಸಲ್ಲಿಸಿದರು. ಹಬ್ಬದ ಮುನ್ನಾದಿನ ಬಿಸಲಕೊಪ್ಪ ಭಾಗದಲ್ಲಿ ಈ ಹಾವುಗಳನ್ನು ಹಿಡಿದು ತಂದಿದ್ದರು. ಪೂಜಿಸಿದ ಬಳಿಕ ಅರಣ್ಯಕ್ಕೆ ಹಾವನ್ನು ಬಿಡಲಾಯಿತು.
'ಹಾವಿನ ಕುರಿತು ಜನರಲ್ಲಿರುವ ತಪ್ಪು ಕಲ್ಪನೆ, ಭಯ ಹೋಗಲಾಡಿಸಲು ಜೀವಂತ ಹಾವಿಗೆ ಪೂಜಿಸುತ್ತಿದ್ದೇನೆ. ಹಾವುಗಳನ್ನು ಕೊಲ್ಲಬಾರದು. ಅವು ಪರಿಸರಕ್ಕೆ ಪೂರಕವಾಗಿ ಎಂಬುದನ್ನು ಪೂಜೆಯ ಮೂಲಕ ಮನವರಿಕೆ ಮಾಡಲಾಗುತ್ತಿದೆ' ಎಂದರು.
ನೀಲೆಕಣಿಯ ಸುಬ್ರಹ್ಮಣ್ಯ ದೇವಾಲಯದಲ್ಲೂ ನೂರಾರು ಭಕ್ತರು ಪೂಜೆ ಸಲ್ಲಿಸಿ ಹಬ್ಬ ಸಂಭ್ರಮಿಸಿದರು.