ಶಿರಸಿ: ಪ್ರತಿ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನನಗೆ ಎದುರಾಳಿಯಾಗಿತ್ತು. ಈ ಬಾರಿ ಬಿಜೆಪಿಯಿಂದ ನಾನೇ ಸ್ಪರ್ಧೆಗಿಳಿದಿರುವ ಕಾರಣ ಸಮರ್ಥ ಪ್ರತಿಸ್ಪರ್ಧಿ ಇಲ್ಲ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಚುನಾವಣೆಗಿಂತ ಈ ಬಾರಿ ಉತ್ಸಾಹ ಹೆಚ್ಚಿದೆ. ಸತತ ಏಳನೇ ಬಾರಿ ಗೆಲ್ಲಿಸಲು ಶಿಕ್ಷಕರು ಉತ್ಸುಕರಾಗಿದ್ದಾರೆ. ಕಣದಲ್ಲಿರುವ ಇತರ ಏಳು ಅಭ್ಯರ್ಥಿಗಳು ಯಾರು ಎಂದು ಈವರೆಗೂ ನೋಡಿಲ್ಲ. ಉಳಿದ ಇಬ್ಬರು ನನ್ನ ಶಿಷ್ಯರು’ ಎಂದರು.
‘ಸುದೀರ್ಘ ರಾಜಕೀಯ ಜೀವನದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇನ್ನೂ ಹಲವು ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ‘ಜಿಲ್ಲೆಯಲ್ಲಿ ಶಿಕ್ಷಕ ಮತದಾರರ ಒಲವು ಹೊರಟ್ಟಿ ಪರ ಇದೆ. ವೈಯಕ್ತಿಕ ವರ್ಚಸ್ಸು, ಪಕ್ಷ ಸಂಘಟನೆಯ ಬಲ ಒಟ್ಟಾಗಿರುವುದು ದೊಡ್ಡ ಅಂತರದ ಗೆಲುವು ಸಾಧ್ಯವಾಗಲಿದೆ’ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಚಂದ್ರು ಎಸಳೆ, ಉಷಾ ಹೆಗಡೆ, ಶಿಕ್ಷಕರ ಸಂಘದ ಜಿ.ಆರ್.ಭಟ್, ಶೋಭಾ ನಾಯ್ಕ, ಇದ್ದರು.