ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸೌಲಭ್ಯಗಳ ಕೊರತೆಯಿಲ್ಲ. ಆಮ್ಲಜನಕದ ಸಿಲಿಂಡರ್ಗಳೂ ಸಾಕಷ್ಟಿವೆ. ಒಟ್ಟು 2,111 ಹಾಸಿಗೆಗಳು ಲಭ್ಯ ಇವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ 744 ಸಾಮಾನ್ಯ ಹಾಸಿಗೆಗಳು, 801 ಆಮ್ಲಜನಕ ಸಹಿತ ಹಾಸಿಗೆಗಳಿವೆ. ತೀವ್ರ ನಿಗಾ ಘಟಕದಲ್ಲಿ 94, ವೆಂಟಿಲೇಟರ್ ರಹಿತ 102 ಹಾಸಿಗೆಗಳು ಇವೆ. ಮಕ್ಕಳ ಚಿಕಿತ್ಸೆಗೆ 124 ಸಾಮಾನ್ಯ, 154 ಆಮ್ಲಜನಕ ಸಹಿತ, 15 ನವಜಾತ ಶಿಶುಗಳಿಗೆ ಹಾಸಿಗೆಗಳಿವೆ’ ಎಂದು ಮಾಹಿತಿ ನೀಡಿದ್ದಾರೆ.
ಲಸಿಕೆಯಲ್ಲಿ ಪ್ರಗತಿ: ‘ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲಿನ ಶೇ 98ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಶೇ 83ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 15ರಿಂದ 18 ವರ್ಷದ ಮಕ್ಕಳ ಲಸಿಕಾಕರಣವು ಇನ್ನೊಂದು ವಾರದಲ್ಲಿ ಶೇ 100 ಆಗುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.
ಇಬ್ಬರಿಗೆ ಕೋವಿಡ್:
‘ಡಿ.31ರ ಬಳಿಕ ಜಿಲ್ಲೆಗೆ ವಿದೇಶಗಳಿಂದ 154 ಮಂದಿ ವಾಪಸಾಗಿದ್ದು, ಅವರಲ್ಲಿ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಇಬ್ಬರೂ ಭಟ್ಕಳದವರಾಗಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಅವರಲ್ಲಿ ಒಬ್ಬರು ಭಟ್ಕಳಕ್ಕೆ ಬಂದು ಎಂಟು ದಿನಗಳ ಬಳಿಕ ಸೋಂಕು ಖಚಿತವಾಗಿದೆ. ಮತ್ತೊಬ್ಬರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ. ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.