ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹಾಲು ಪ್ಯಾಕಿಂಗ್ ಘಟಕ ಶೀಘ್ರ ಕಾರ್ಯಾರಂಭ

ರಾಜ್ಯದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ
Last Updated 19 ಜನವರಿ 2022, 19:30 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಹನುಮಂತಿಯಲ್ಲಿರುವ ಧಾರವಾಡ ಹಾಲು ಒಕ್ಕೂಟದ (ಧಾಮುಲ್) ಹಾಲು ಶೀತಲೀಕರಣ ಘಟಕದ ಆವರಣದಲ್ಲಿ ಹಾಲು ಪ್ಯಾಕಿಂಗ್ ಘಟಕ ನಿರ್ಮಾಣ ಪೂರ್ಣ ಹಂತಕ್ಕೆ ತಲುಪಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪನೆಯಾದ ರಾಜ್ಯದ ಮೊದಲ ಪ್ಯಾಕಿಂಗ್ ಘಟಕ ಇದಾಗಲಿದೆ.

ಧಾಮುಲ್‍ಗೆ ಸೇರಿದ ಜಾಗದಲ್ಲಿ ಸುಮಾರು ₹18 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಶಿರಸಿ ಡೇರಿ ಪ್ರೈವೇಟ್ ಲಿ. ಸಂಸ್ಥೆ ಹಾಲು ಪ್ಯಾಕಿಂಗ್ ಘಟಕ ಸ್ಥಾಪಿಸುತ್ತಿದೆ. ಕಳೆದೊಂದು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅಳವಡಿಕೆ ನಡೆಯುತ್ತಿದೆ.

ನಂದಿನಿ ಬ್ರ್ಯಾಂಡ್‍ನ ಮೂರು ಬಗೆಯ ಹಾಲಿನ ಪ್ಯಾಕಿಂಗ್, ಹೆಚ್ಚುವರಿ ಹಾಲನ್ನು ಸಂಸ್ಕರಿಸಿ ಬೆಣ್ಣೆ, ತುಪ್ಪ ಸಿದ್ಧಪಡಿಸಿ ಅವುಗಳನ್ನೂ ಪ್ಯಾಕಿಂಗ್ ಮಾಡುವ ವ್ಯವಸ್ಥೆಯನ್ನು ಘಟಕ ಹೊಂದಿದೆ. ಇವುಗಳಿಗೆ ಪ್ರತ್ಯೇಕ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ತಂತ್ರಜ್ಞರು ಪ್ರಾಯೋಗಿಕ ಪರೀಕ್ಷೆ ಆರಂಭಿಸಿದ್ದಾರೆ.

‘15 ವರ್ಷಗಳ ಅವಧಿಗೆ ಜಾಗವನ್ನು ಲೀಸ್‍ಗೆ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಹಾಲು ಶೀತಲೀಕರಣ ಘಟಕಕ್ಕೆ ಹೊಂದಿಕೊಂಡಿರುವ ಘಟಕದಿಂದ ಪ್ರತಿನಿತ್ಯ ಜಿಲ್ಲೆಗೆ ಅಗತ್ಯದಷ್ಟು ಹಾಲು ಪೊಟ್ಟಣಗಳು ರವಾನೆಯಾಗಲಿದೆ’ ಎನ್ನುತ್ತಾರೆ ಧಾಮುಲ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ.

‘ಡೇರಿಗಳಿಂದ ಹಾಲು ಸಂಗ್ರಹಿಸಿ ಘಟಕಕ್ಕೆ ಪೂರೈಸುವ ಕಾರ್ಯವನ್ನು ಒಕ್ಕೂಟವೇ ಮಾಡುತ್ತದೆ. ದಿನವೊಂದಕ್ಕೆ 55 ರಿಂದ 1 ಲಕ್ಷ ಲೀ. ಹಾಲನ್ನು ಪ್ಯಾಕಿಂಗ್ ಮಾಡುವ ಸಾಮರ್ಥ್ಯವನ್ನು ಘಟಕ ಹೊಂದಿದೆ.ಪ್ರತಿ ಹಾಲಿನ ಪೊಟ್ಟಣ ಸಿದ್ಧಪಡಿಸಲು ತಲಾ ₹4.09 ಮೊತ್ತ ಸಂಸ್ಥೆಗೆ ಪಾವತಿಸಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 50 ರಿಂದ 52 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. 55 ಸಾವಿರ ಲೀ. ಹಾಲು ಮಾರಾಟವಾಗುತ್ತಿದೆ. ಮಾರುಕಟ್ಟೆಯ ಈ ಲೆಕ್ಕಾಚಾರ ಆಧರಿಸಿ ಸ್ಥಳೀಯವಾಗಿ ಪ್ಯಾಕಿಂಗ್ ಘಟಕ ಸ್ಥಾಪನೆಗೆ ಪ್ರಯತ್ನಿಸಲಾಯಿತು. ನಾಲ್ಕಾರು ವರ್ಷಗಳ ನಿರಂತರ ಪ್ರಯತ್ನ ಫಲಿಸಿತು’ ಎಂದು ಹೇಳಿದರು.

‘ಶಿರಸಿಯ ಘಟಕದಲ್ಲಿ ಸಂಗ್ರಹಣೆಗೊಂಡ ಹಾಲನ್ನು ಪಾಶ್ಚೀಕರಿಸಿ ಧಾರವಾಡಕ್ಕೆ ಕಳುಹಿಸಬೇಕಿತ್ತು. ಅಲ್ಲಿಂದ ಪ್ಯಾಕಿಂಗ್ ಆಗಿ ಮರಳಿ ಮಾರುಕಟ್ಟೆಗೆ ಬರಲು ಎರಡು ದಿನ ಆಗುತ್ತಿತ್ತು. ಸ್ಥಳಿಯವಾಗಿ ಪ್ಯಾಕಿಂಗ್ ಘಟಕ ಸ್ಥಾಪನೆಯಾಗುವುದರಿಂದ ಅಂದಿನ ಹಾಲು ಅದೇ ದಿನ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ’ ಎಂದರು.

70 ಸಾವಿರ ಲೀ. ಗುರಿ:

‘ಜಿಲ್ಲೆಯಲ್ಲಿ ಸಂಗ್ರಹವಾಗುವ ಹಾಲಿನ ಪ್ರಮಾಣಕ್ಕಿಂತ 5 ಸಾವಿರ ಲೀ.ನಷ್ಟು ಹೆಚ್ಚು ಹಾಲಿಗೆ ಬೇಡಿಕೆ ಇದೆ. ಪ್ರಸ್ತುತ ಸರಾಸರಿ 50 ಸಾವಿರ ಲೀ. ಹಾಲು ಸಂಗ್ರಹವಾಗುತ್ತಿದೆ. ಅದನ್ನು ಇನ್ನೂ 15 ರಿಂದ 20 ಸಾವಿರ ಲೀ.ಗೆ ಹೆಚ್ಚಿಸಬೇಕಿದೆ. ಆ ಮೂಲಕ ಇತರ ಖಾಸಗಿ ಕಂಪನಿಗಳ ಹಾಲು ಉಪಯೋಗಿಸುವ ಗ್ರಾಹಕರನ್ನು ಸೆಳೆಯುವ ಪ್ರಯತ್ನದ ಗುರಿ ಹೊಂದಿದ್ದೇವೆ’ ಎಂದು ಧಾಮುಲ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT