ಶಿರಸಿ: ‘ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶದಲ್ಲಿ ಈಚೆಗೆ ಪಾರ್ಥೇನಿಯಂ ತೀವ್ರಗತಿಯಲ್ಲಿ ಪಸರಿಸುತ್ತಿದೆ. ಖಾಲಿ ನಿವೇಶನ, ರಸ್ತೆಯ ಇಕ್ಕೆಲದಲ್ಲಿ ಕಾಣಸಿಗುವ ಈ ಸಸಿಗಳು ಚರ್ಮರೋಗ ಉಂಟುಮಾಡುತ್ತಿವೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟ ವಿಜ್ಞಾನಿ ಡಾ.ರೂಪಾ ಪಾಟೀಲ್ ಹೇಳಿದರು.
‘ಏಕಕಾಲದಲ್ಲಿಯೇ ಈ ಕಳೆಯ ನಿರ್ಮೂಲನೆ ಅಸಾಧ್ಯ. ಸಾಮೂಹಿಕ ಕಳೆ ನಿರ್ಮೂಲನಾ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಂಡಾಗ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗುತ್ತದೆ’ ಎಂದು ಅವರು ಈಚೆಗೆ ಆಯೋಜಿಸಿದ್ದ ಪಾರ್ಥೇನಿಯಂ ನಿರ್ಮೂಲನೆ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಹೇಳಿದರು.
ಕಳೆಯ ಜೈವಿಕ ನಿಯಂತ್ರಕವಾದ ಝೈಗೊಗ್ರಾಮ ದುಂಬಿಗಳನ್ನು ಪಾರ್ಥೇನಿಯಂ ಕಳೆ ಆವರಿಸಿದ ನಿವೇಶನದಲ್ಲಿ ಬಿಡುಗೊಡೆಗೊಳಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗಿತ್ತು.
‘ಝೈಗೊಗ್ರಾಮ ದುಂಬಿ ಹಾಗೂ ಮರಿ ಹುಳುಗಳು ಪಾರ್ಥೇನಿಯಂ ಕಳೆಯ ಎಲೆ ಹಾಗೂ ಇತರೆ ಭಾಗಗಳನ್ನು ತಿಂದು ಕಳೆಯ ಬೆಳವಣಿಗೆ ಕುಂಠಿತಗೊಳಿಸುತ್ತದೆ. ಪಾರ್ಥೇನಿಯಂ ಹೊರತಾದ ಬೇರೆ ಸಸಿಗಳಿಗೆ ಹಾನಿ ಉಂಟು ಮಾಡುವುದಿಲ್ಲ’ ಎಂದು ಡಾ.ರೂಪಾ ತಿಳಿಸಿದರು.
ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.