ಶಿರಸಿ: ನಗರದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ–ವಹಿವಾಟು ಜೋರಾಗಿ ನಡೆಯುತ್ತಿದೆ. ಮಂಗಳವಾರದವರೆಗೆ ಅರ್ಧದಿನ ಮಾತ್ರ ವಹಿವಾಟಿಗೆ ಅವಕಾಶ ನೀಡಿದ್ದರಿಂದ ಪೇಟೆಯಲ್ಲಿ ಜನದಟ್ಟಣಿಯೂ ಜೋರಾಗಿತ್ತು. ಈ ನಡುವೆ ನಿಯಮ ಪಾಲನೆ ಮಾಡದ ಸಾರ್ವಜನಿಕರಿಗೆ ದಂಡ ಹಾಕುವ ಮೂಲಕ ನಗರಸಭೆ ಅಧಿಕಾರಿಗಳು ಬಿಸಿಮುಟ್ಟಿಸಿದರು.
ಯಲ್ಲಾಪುರ ನಾಕಾ, ಅಶ್ವಿನಿ ಸರ್ಕಲ್, ನಟರಾಜ ರಸ್ತೆ, ದೇವಿಕೆರೆ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ನಗರಸಭೆ ಪರಿಸರ ಎಂಜಿನಿಯರ್ ಶಿವರಾಜ್, ದ್ವಿತೀಯ ದರ್ಜೆ ಸಹಾಯಕ ಸಂಜಯ್ ಅವರು, ಮುಖಗವಸು ಧರಿಸದ, ದೈಹಿಕ ಅಂತರ ಪಾಲಿಸದವರಿಗೆ ತಲಾ ₹ 100 ದಂಡ ವಿಧಿಸಿದರು. ಒಟ್ಟು 29 ಪ್ರಕರಣಗಳಿಗೆ ₹ 3700 ದಂಡ ವಿಧಿಸಲಾಗಿದೆ.
‘ಸಾರ್ವಜನಿಕರು ಪೇಟೆಯಲ್ಲಿ ವಹಿವಾಟು ನಡೆಸುವಾಗ ಕಡ್ಡಾಯವಾಗಿ ದೈಹಿಕ ಅಂತರ ಪಾಲಿಸಬೇಕು. ಮುಖಗವಸು ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕಂಡಕಂಡಲ್ಲಿ ಉಗುಳುವುದನ್ನು ನಿಷೇಧಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದಲ್ಲಿ, ನಗರಸಭೆ ದಂಡ ಹಾಕುತ್ತದೆ. ಈ ಪ್ರಕ್ರಿಯೆ ನಿರಂತರ ಜಾರಿಯಲ್ಲಿರುತ್ತದೆ’ ಎಂದು ಎಂಜಿನಿಯರ್ ಶಿವರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.