ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಮರಣ ದಾಖಲೆ ಪ್ರಕರಣ: ಜಾಲಿ ಪ.ಪಂ ಸಿಬ್ಬಂದಿ ವಶಕ್ಕೆ

Last Updated 1 ಜೂನ್ 2022, 14:14 IST
ಅಕ್ಷರ ಗಾತ್ರ

ಭಟ್ಕಳ: ಸುಳ್ಳು ಮರಣ ದಾಖಲೆ ನೀಡಿದ ಪ್ರಕರಣದಲ್ಲಿ ಜಾಲಿ ಪಟ್ಟಣ ಪಂಚಾಯಿತಿಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ದ್ವಿತೀಯ ದರ್ಜೆ ಗುಮಾಸ್ತ ಇಸ್ಮಾಯಿಲ್ ಗುಬ್ಬಿ ಹಾಗೂ ನೀರು ಸರಬರಾಜು ವಿಭಾಗದ ಹೊರಗುತ್ತಿಗೆ ಸಿಬ್ಬಂದಿ ಅನ್ವರ್ ಸೆರೆ ಸಿಕ್ಕವರು.

ಪ್ರಕರಣದ ಹಿನ್ನೆಲೆ:

ಮೀನಾಕ್ಷಿ ಬಿ.ಎಚ್. ಎಂಬ ಮಹಿಳೆಯು ಕಳೆದ ವರ್ಷ ಜುಲೈ 27ರಂದು ತಮ್ಮ ಮಗಎಚ್.ವಿ.ಹರ್ಷವರ್ಧನ ಅವರ ಮರಣಪತ್ರ ಪಡೆಯಲು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಜಾಲಿ ಜಂಗನಗದ್ದೆಯ ನಿವಾಸದಲ್ಲಿ ಮೃತಪಟ್ಟ ಬಗ್ಗೆ ಮರಣ ದಾಖಲೆ ನೀಡಲು ಮನವಿ ಮಾಡಿದ್ದರು. ಇದಕ್ಕೆ ಅದೇ ವಿಳಾಸದ ಆಧಾರ್ ಕಾರ್ಡ್ ಪ್ರತಿ ನೀಡಿದ್ದರು.

ಅರ್ಜಿಯ ಜೊತೆ, ಮಗ ಎದೆ ನೋವಿಗೆ ಜುಲೈ 21ರಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಚೀಟಿಯನ್ನು ಲಗತ್ತಿಸಿದ್ದರು. ಪಟ್ಟಣ ಪಂಚಾಯಿತಿ ಸಿಬ್ಬಂದಿಯು, ಸೆ.21ರಂದು ಮರಣ ದಾಖಲೆ ನೀಡಿದ್ದರು. ಇದೇ ಮರಣ ದಾಖಲೆಯನ್ನು ನೀಡಿ ಅರ್ಜಿದಾರರು ವಿಮೆ ಪರಿಹಾರ ಹಣ ಪಡೆಯಲು ವಿಮೆ ಕಂಪನಿಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಮೆ ಕಂಪನಿಗೆ ಎಚ್.ವಿ.ಹರ್ಷವರ್ಧನ ಜೀವಂತ ಇರುವುದು ತಿಳಿದುಬಂದಿತು. ಈ ಬಗ್ಗೆ ಜಾಲಿ ಪಟ್ಟಣ ಪಂಚಾಯಿತಿಯಿಂದ ಪೊಲೀಸ್ ದೂರು ದಾಖಲಾಯಿತು. ಬಳಿಕ ಹರ್ಷವರ್ಧನ ಅವರನ್ನು ಬಂಧಿಸಲಾಗಿತ್ತು.

ನೀರು ಸರಬರಾಜು ವಿಭಾಗದ ಹೊರಗುತ್ತಿಗೆ ಸಿಬ್ಬಂದಿ ಅನ್ವರ್
ನೀರು ಸರಬರಾಜು ವಿಭಾಗದ ಹೊರಗುತ್ತಿಗೆ ಸಿಬ್ಬಂದಿ ಅನ್ವರ್

ಮೀನಾಕ್ಷಿ ಪಟ್ಟಣ ಪಂಚಾಯಿತಿ ಕಚೇರಿಗೆ ಬರದೇ ಆರೋಪಿ ಇಸ್ಮಾಯಿಲ್ ಗುಬ್ಬಿಯೇ ಅರ್ಜಿಯನ್ನು ಸಿದ್ಧಪಡಿಸಿ ಟಪಾಲಿನಲ್ಲಿ ಸೇರಿಸಿದ್ದರು. ನಂತರ ಮರಣ ದಾಖಲೆ ಸಿದ್ಧಪಡಿಸಿ ಅವರಿಗೆ ಹಸ್ತಾಂತರ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿತ್ತು. ಆರೋಪಿಗೆ ಸಹಕರಿಸಿದ ಆರೋಪದಲ್ಲಿ ನೀರು ಸರಬರಾಜು ಹೊರಗುತ್ತಿಗೆ ಸಿಬ್ಬಂದಿ ಅನ್ವರ್ ಅವರನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT