ಶಿರಸಿ: ಸಿಒಡಿ ಇನಸ್ಪೆಕ್ಟರ್ ಎಂದು ಹೇಳಿಕೊಂಡು ನಗರದ ಶಾಂತಿಕಾ ಲ್ಯಾಬ್ ಸೇರಿದಂತೆ ಅನೇಕ ರಕ್ತ ತಪಾಸಣಾ ಲ್ಯಾಬ್ಗಳಿಗೆ ವಂಚಿಸಿದ ಆರೋಪಿಯನ್ನು ನಗರದ ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲ್ಲೂಕಿನ ಕಾನಗೋಡಿನ ಲಕ್ಷ್ಮೀಕಾಂತ ಈಶ್ವರ ನಾಯ್ಕ (32) ಬಂಧಿತ ಆರೋಪಿ. ‘ಈತ ಪೊಲೀಸ್ ಸಮವಸ್ತ್ರ ಧರಿಸಿ, ಸೆ.16ರಂದು ನಗರದ ಅನೇಕ ಲ್ಯಾಬ್ಗಳಿಗೆ ಭೇಟಿ ನೀಡಿ, ತಾನು ಕಾರವಾರದಿಂದ ಬಂದಿರುವ ಸಿಒಡಿ ಅಧಿಕಾರಿ ಮಹೇಶ ಎಂದು ಹೇಳಿಕೊಂಡು, ಲ್ಯಾಬ್ಗೆ ಸಂಬಂಧಿಸಿದ ದಾಖಲಾತಿಗಳ ಚಿತ್ರ ತೆಗೆದುಕೊಂಡು ಬಂದಿದ್ದ. ಆರೋಪಿಯ ಚಿತ್ರ ಸಿ.ಸಿ.ಟಿ.ವಿ.ಯಲ್ಲಿ ದಾಖಲಾಗಿತ್ತು. ಇನ್ನುಳಿದ ಆರೋಪಿಗಳ ಪತ್ತೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಗಿರೀಶ, ಪಿಎಸ್ಐಗಳಾದ ಮಾದೇಶ, ಮಾಲಿನಿ ಹಂಸಬಾವಿ, ಎಎಸ್ಐ ಚೂಡಾಮಣಿ ನಾಯ್ಕ, ಸಿಬ್ಬಂದಿ ಅಶೋಕ ಹರಿಕಂತ್ರ, ಮಂಗಲಮೂರ್ತಿ ಶಿರಹಟ್ಟಿ, ಪ್ರಶಾಂತ ಪಾವಸ್ಕರ, ಮಲ್ಲಿಕಾರ್ಜುನ ಕುದರಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.