ಶಿರಸಿ: ಅಪಾಯಕಾರಿಯಾಗಿ ಪರಿಣಮಿಸಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯ ಹಾರೂಗಾರ ತಿರುವಿನ ಬಳಿ ಭಾನುವಾರ ವಾಹನಗಳ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಗೋಳಿ ಕ್ರಾಸ್ನಿಂದ ಹಾರೂಗಾರ ತಿರುವಿನ ಬಳಿಯವರೆಗೆ ಇರುವ ಇಳಿಜಾರಿನ ಪ್ರದೇಶದಲ್ಲಿ ನಾಲ್ಕು ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆಯಾಗಿದೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಆರ್.ಎನ್.ಎಸ್.ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಇವುಗಳನ್ನು ಅಳವಡಿಸಿದೆ.
‘ಅಪಾಯಕಾರಿಯಾದ ಹೆದ್ದಾರಿ ತಿರುವು’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಜು.17 ರಂದು ವರದಿ ಪ್ರಕಟಿಸಿತ್ತು. ಇಳಿಜಾರಿನ ತಿರುವಿನಲ್ಲಿ ವಾಹನಗಳು ಪಲ್ಟಿಯಾಗುತ್ತಿರುವ ಸಮಸ್ಯೆಯ ಕುರಿತು ವಿವರಿಸಲಾಗಿತ್ತು.
‘ವಾಹನಗಳ ವೇಗ ನಿಯಂತ್ರಿಸಿದರೆ ಅಪಘಾತ ಪ್ರಮಾಣವನ್ನೂ ತಕ್ಕಮಟ್ಟಿಗೆ ನಿಯಂತ್ರಿಸಲು ಸಾಧ್ಯವಿದೆ. ಮಳೆ ಇಳಿಕೆಯಾದ ನಂತರ ತಿರುವಿನಲ್ಲಿ ಬಾಕಿ ಇರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಆರ್.ಎನ್.ಎಸ್.ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಹೈವೆ ಎಂಜಿನಿಯರ್ ಗೋವಿಂದ ಭಟ್ಟ ತಿಳಿಸಿದ್ದಾರೆ.