ಶಿರಸಿ: ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ಪ್ರಶಾಂತ ದೇಶಪಾಂಡೆ ಅಭ್ಯರ್ಥಿಯಾಗಬೇಕು ಎಂದು ಕ್ಷೇತ್ರ ವ್ಯಾಪ್ತಿಯ ಮೂರು ಬ್ಲಾಕ್ದಿಂದ ಕೆಪಿಸಿಸಿಗೆ ಪತ್ರ ಸಲ್ಲಿಸಲಾಗಿದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕರ್ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಶಾಂತ್ ಆಸಕ್ತಿಯಿಂದ ಸ್ಪರ್ಧೆಗೆ ಮುಂದೆ ಬಂದಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಯಾರೂ ಅರ್ಹರಿಲ್ಲದ ಕಾರಣ ಅವರನ್ನು ಅಂತಿಮಗೊಳಿಸಲಿ ಎಂಬ ಅಭಿಪ್ರಾಯವಿದೆ’ ಎಂದರು.
‘ಅಸಮಾಧಾನ ಎಲ್ಲ ಪಕ್ಷಗಳಲ್ಲೂ ಸಹಜ. ಪಕ್ಷದೊಳಗಿನ ಬಂಡಾಯ, ಭಿನ್ನಮತಗಳನ್ನು ಶೀಘ್ರವೇ ಬಗೆಹರಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.
ದೇಶಪಾಂಡೆ ಟೀಕಿಸುವ ನೈತಿಕತೆ ಇಲ್ಲ:
‘ಆರ್.ವಿ.ದೇಶಪಾಂಡೆ ಅವರ ವಿರುದ್ಧ ಸಚಿವ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಮಾತನಾಡಿದ್ದು ಅವರು ವಿವೇಕ ಕಳೆದುಕೊಂಡಿದ್ದನ್ನು ಸೂಚಿಸುತ್ತಿದೆ. ಮುತ್ಸದ್ಧಿ ರಾಜಕಾರಣಿ ದೇಶಪಾಂಡೆ ಟೀಕಿಸುವ ನೈತಿಕತೆ ಅವರಿಗಿಲ್ಲ’ ಎಂದು ಟೀಕಿಸಿದರು.
‘ಯಲ್ಲಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿದ್ದು ದೇಶಪಾಂಡೆ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಎಂದು ಹೆಬ್ಬಾರ ಪುತ್ರ ನೆನಪಿಡಬೇಕು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾದ ಶಿವರಾಮ ಹೆಬ್ಬಾರ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೀಪಕ ದೊಡ್ಡೂರು, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಬಸವರಾಜ ದೊಡ್ಮನಿ, ಶ್ರೀಲತಾ ಕಾಳೇರಮನೆ, ಎಸ್.ಜಿ.ಭಟ್ ಇದ್ದರು.