ಅಂಕೋಲಾ:‘ನೀರಾವರಿಪಂಪ್ ಸೆಟ್ಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇಂಧನ ಪೂರೈಸಲಾಗುತ್ತದೆ. ಯಾರೂಅನಗತ್ಯವಾಗಿ ನಗರಕ್ಕೆ ಬರಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಕೋವಿಡ್ 19, ಮಂಗನಕಾಯಿಲೆ, ಕುಡಿಯುವ ನೀರಿನ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಈಗಾಗಲೇ ಅವಕಾಶ ನೀಡಿದ ಹಾಗೆ ಮೀನು ಮಾರಾಟ ಮಾಡುವವರಿಗೆ ತೊಂದರೆಆಗದಂತೆನೋಡಿಕೊಳ್ಳಬೇಕು’ ಎಂದೂ ಸೂಚಿಸಿದರು.
‘ಹೊರ ಜಿಲ್ಲೆಗಳಿಂದ ಬರುವವರನ್ನು ಜಿಲ್ಲೆಗೆ ಬರಲು ಅವಕಾಶ ನೀಡುವಂತೆ ಒತ್ತಡ ತರುವುದು ಬೇಡ. ಕೊರೊನಾ ಮುಕ್ತ ಜಿಲ್ಲೆಯಾಗಲು ಇನ್ನೆರಡು ಪ್ರಕರಣಗಳು ಬಾಕಿ ಇವೆ. ಎಲ್ಲ ನಿರ್ಬಂಧಿಗಳಿಂದ ಸಾರ್ವಜನಿಕರಿಗೆ ಕೆಲವು ದಿನಗಳಷ್ಟೇ ತೊಂದರೆಯಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ನಮ್ಮ ಆರೋಗ್ಯಕ್ಕಾಗಿಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ವರ್ಗದವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳು’ ಎಂದರು.
‘ಟಾಸ್ಕ್ಫೋರ್ಸ್ಗೆ ₹ 50 ಲಕ್ಷ’:‘ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲ ಕಾರ್ಖಾನೆಗಳು, ಗಿರಣಿಗೆ ಅನುಮತಿ ನೀಡಲಾಗಿದೆ. ಇವುಗಳಿಗೆ ಯಾವುದೇ ಪರವಾನಗಿ ಅಗತ್ಯವಿಲ್ಲ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಟಾಸ್ಕ್ಫೋರ್ಸ್ಗೆ ₹ 50 ಲಕ್ಷ ನೀಡಲಾಗಿದೆ. ಎಲ್ಲಿಯೂ ನೀರಿನ ಕೊರತೆ ಆಗಬಾರದು’ ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ನೀಡುವ ಪಾಸ್ಗಳ ದುರುಪಯೋಗ ತಪ್ಪಿಸಲು ಇನ್ನು ಮುಂದೆ ಕ್ಯೂ.ಆರ್ ಕೋಡ್ ಅಳವಡಿಸಲಾಗುವುದು. ಪಾಸ್ ಹೊಂದಿದವರ ಸಂಪೂರ್ಣ ಮಾಹಿತಿಗಳು ಆ್ಯಪ್ ಮೂಲಕ ಲಭಿಸುತ್ತವೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯ್ತಿಹಂತದಲ್ಲಿ ಪಿ.ಡಿ.ಒ ಮೂಲಕ ಪಾಸ್ ವಿತರಣೆಗೆ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆ, ಕೃಷಿ ಉತ್ಪನ್ನ ರಪ್ತು, ಜಾನುವಾರಿಗೆ ಮೇವು, ನೆರೆಯಿಂದ ಹಾನಿಯಾದ ಮನೆಗಳ ನಿರ್ಮಾಣ ಕುರಿತು ಹಳ್ಳಿಗಳಿಗೆ ನೋಡಲ್ ಅಧಿಕಾರಿ ನೇಮಿಸಬೇಕು. ಔಷಧದ ಕೊರತೆಯಂತಹ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.
ಲಾಕ್ಡೌನ್ ಅವಧಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವತಹಶೀಲ್ದಾರ್ ಉದಯ ಕುಂಬಾರ, ಸಿ.ಪಿ.ಐ ಕೃಷ್ಣಾನಂದ ನಾಯಕ, ತಾಲ್ಲೂಕು ಪಂಚಾಯ್ತಿಕಾರ್ಯ ನಿರ್ವಹಣಾಧಿಕಾರಿಪರಶುರಾಮ ಸಾವಂತ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ನಾಯಕ ಅವರಿಗೆ ಅಭಿನಂದನಾ ಪತ್ರಗಳನ್ನು ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶದೇವರಾಜು,ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಉಪವಿಭಾಗಾಧಿಕಾರಿ ಅಜಿತ್ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.