ಶಿರಸಿ: ಸೇವಾ ಜ್ಯೇಷ್ಠತೆ ಆಧರಿಸಿದ ಮುಂಬಡ್ತಿ ಸರ್ಕಾರಿ ನೌಕರರ ಸಂವಿಧಾನಬದ್ಧ ಹಕ್ಕೇ ಹೊರತು ಮೀಸಲಾತಿ ಆಧರಿಸಿದ ಮುಂಬಡ್ತಿ ಅಲ್ಲ ಎಂದು ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ ನೌಕರರು) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ನಾಗರಾಜ್ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಜ.28 ರಂದು ನೀಡಿರುವ ಮಧ್ಯಂತರ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ’ ಎಂದರು.
‘ಪ್ರತಿ ಇಲಾಖೆಯಲ್ಲಿ ಕರ್ತವ್ಯನಿರತ ನೌಕರರ ಶೇ.18ರಷ್ಟು ಪರಿಶಿಷ್ಟ ವರ್ಗದ ನೌಕರರಿಗೆ ಬಡ್ತಿ ನೀಡಲು ಆಕ್ಷೇಪವಿಲ್ಲ. ಆದರೆ ಅದನ್ನು ಮೀರಿದ ಪ್ರಮಾಣದಲ್ಲಿ ಮುಂಬಡ್ತಿ ನೀಡುವುದಕ್ಕೆ ವಿರೋಧವಿದೆ. ಉಳಿದ ಶೇ.82 ಪ್ರಮಾಣದ ಮುಂಬಡ್ತಿಯನ್ನು ಅಹಿಂಸಾ ನೌಕರ ವರ್ಗಕ್ಕೆ ನೀಡಬೇಕು’ ಎಂದರು.
‘ಸಿದ್ದರಾಮಯ್ಯ ಸರ್ಕಾರ ಅಹಿಂಸಾ ವರ್ಗಕ್ಕೆ ಅನ್ಯಾಯ ಮಾಡಿದೆ. ಚುನಾವಣೆ ಸಮೀಪಿಸಿರುವ ಕಾರಣ ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ ಪಾಲನೆಗೆ ಈಗಿನ ಸರ್ಕಾರವೂ ಹಿಂದೇಟು ಹಾಕುತ್ತಿರುವ ಅನುಮಾನವಿದೆ. ಮತ್ತೆ ನೌಕರರಿಗೆ ಅನ್ಯಾಯವಾದರೆ ರಾಜ್ಯವ್ಯಾಪಿ ಹೋರಾಟ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.