ಶಿರಸಿ: ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಈಗಿನ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಮೌಲ್ಯಗಳು ಪ್ರಸ್ತುತ ಎನಿಸುತ್ತವೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮದಿನದ ಅಂಗವಾಗಿ ನಗರದ ಯಲ್ಲಾಪುರ ನಾಕಾದಲ್ಲಿರುವ ಆವರ ಪುತ್ಥಳಿಗೆ ಭಾನುವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಗಡೆ ಮಾರ್ಗದರ್ಶಿಯಾಗಿದ್ದಾರೆ. ವಿಕೇಂದ್ರೀಕರಣವ್ಯವಸ್ಥೆಯಲ್ಲಿ ಬದಲಾವಣೆ ತಂದು ಮಾದರಿ ಆಡಳಿತ ನೀಡಿದ್ದರು. ಅವರ ಆದರ್ಶ ಈಗಿನ ರಾಜಕಾರಣಿಗಳು ಪಾಲಿಸಬೇಕು' ಎಂದರು.
ರಾಮಕೃಷ್ಣ ಹೆಗಡೆ ಅಭಿಮಾನಿ ಬಳಗದ ಪ್ರಮುಖ ವೆಂಕಟೇಶ ಹೆಗಡೆ ಹೊಸಬಾಳೆ, ‘ಯಲ್ಲಾಪುರ ನಾಕಾ ಮುಖ್ಯ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರಿಡಬೇಕು. ಅವರ ಹೆಸರಿನಲ್ಲಿ ಸಂಸದೀಯ ಮೌಲ್ಯಗಳ ಕುರಿತು ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.