ಶಿರಸಿ: ದೇಶಭಕ್ತಿ ಗೀತೆಗೆ ಲಯಬದ್ಧವಾದ ನೃತ್ಯ, ಆಕರ್ಷಕ ಪಥಸಂಚಲನ, ಶಿಸ್ತುಬದ್ಧ ಕವಾಯತು, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ಶನಿವಾರ ಇಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಈ ದೇಶದ ಜನರ ಆಶೋತ್ತರಗಳಿಗೆ ಮುನ್ನುಡಿಯಾಗಿರುವ ಸಂವಿಧಾನವು ಹಲವಾರು ತಿದ್ದುಪಡಿಗಳ ಹೊರತಾಗಿಯೂ ಮೂಲ ಸ್ವರೂಪ ಕಳೆದುಕೊಂಡಿಲ್ಲ. ಸಂವಿಧಾನವು ಮೂಲಭೂತ ಹಕ್ಕುಗಳ ಜತೆಗೆ, ಜವಾಬ್ದಾರಿಯನ್ನು ನಿಗದಿಪಡಿಸಿದೆ. ದೇಶದ ಸಂಸ್ಕೃತಿಯ ಪ್ರಗತಿಗಾಮಿ ಮೌಲ್ಯಗಳನ್ನು ಉಳಿಸಿಕೊಂಡು, ವಿಶ್ವದ ಬೇರೆ ದೇಶಗಳ ಸಂವಿಧಾನಗಳಲ್ಲಿ ಒಳಗೊಂಡಿರುವ ಶ್ರೇಷ್ಠ ಮೌಲ್ಯಗಳನ್ನು ಜನತೆಗೆ ನೀಡುವ ಮೂಲಕ ಭಾರತದ ಸಂವಿಧಾನವು ವಸುದೈವ ಕುಟುಂಬ ಎನ್ನುವ ವಿಶ್ವಮಾನವ ತತ್ವವನ್ನು ಸಾರುವ ಶ್ರೇಷ್ಠತೆಯನ್ನು ಹೊಂದಿದೆ ಎಂದು ಹೇಳಿದರು.
ಪೊಲೀಸರು, ಗೃಹರಕ್ಷಕ ದಳ, ಎನ್ಎಸ್ಎಸ್, ಎನ್ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು, 1300ಕ್ಕೂ ಹೆಚ್ಚು ಶಾಲಾ ಮಕ್ಕಳು ಪಥ ಸಂಚಲನದಲ್ಲಿ ಭಾಗವಹಿಸಿ, ಧ್ವಜ ವಂದನೆ ಸಲ್ಲಿಸಿದರು. ಅಜಿತಮನೋಚೇತನಾ ಶಾಲೆಯ ವಿಕಾಸ ಶಾಲೆಯ ವಿಶೇಷ ಮಕ್ಕಳು ಶಿಕ್ಷಕಿಯರೊಡಗೂಡಿ, ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರು.
ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಮಮತಾ ನಾಯ್ಕ, ರೇಷ್ಮಾ ಪಾವದ್, ನಿಶಾಂತ ನಾಯ್ಕ, ಆರ್ಯನ್ ದಿವಾಕರ, ರೋಹಿತ್ ಶೆಟ್ಟಿ, ಚೈತನ್ಯ ಕಾಂತು, ಲಖನ್ ಜೈವಂತ, ಗಿಬ್ಸನ್ ಡಿಸೋಜಾ, ಆದಿತ್ಯ ನಾಯ್ಕ, ಅತೀಕ್ ಖಾನ್, ಕಿರಣ ಭೋವಿವಡ್ಡರ, ನಯನಾ ಮರಾಠಿ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷೆ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಇದ್ದರು. ಗಣರಾಜ್ಯೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.