ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಅವರ ಕಾರು ಹಾಗೂ ಮತ್ತೊಂದು ಕಾರು,ತಾಲ್ಲೂಕಿನ ಬಿಸಗೋಡ ಕ್ರಾಸ್ ಬಳಿ ಮಂಗಳವಾರ ಮುಖಾಮುಖಿ ಡಿಕ್ಕಿಯಾಗಿವೆ.
ಎರಡೂ ಕಾರುಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಮಂಗೇಶ ಅವರ ಕಾರಿಗೆ, ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ದರ್ಶನ ಎಂಬುವವರ ಕಾರು ಡಿಕ್ಕಿಯಾಯಿತು.
ನಾಗಪುರದ ಆರ್.ಎಸ್.ಎಸ್. ಕೇಂದ್ರ ಸ್ಥಾನದಲ್ಲಿರುವ ಮಂಗೇಶ, ಗಣೇಶ ಚತುರ್ಥಿ ನಿಮಿತ್ತ ತಮ್ಮ ಊರಾದ ಅಂಕೋಲಾಕ್ಕೆ ತೆರಳುತ್ತಿದ್ದರು. ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರದ ನಂತರ ಬೇರೆ ಕಾರಿನಲ್ಲಿ ಅಂಕೋಲಾಕ್ಕೆ ಪ್ರಯಾಣ ಮುಂದುವರಿಸಿದರು.