ಶಿರಸಿ: ಪಡಿತರ ಚೀಟಿಗಳಿಗೆ ಇ–ಕೆವೈಸಿ ಮಾಡಿಸಿಕೊಂಡ ಗ್ರಾಹಕರಿಗೆ ಹೊಸ ಕಾರ್ಡ್ಗಳನ್ನು ನೀಡಲಾಗುತ್ತಿದ್ದು, ಮತ್ತೆ ಲಾಕ್ಡೌನ್ ಜಾರಿಯಾಗಬಹುದೆಂಬ ಆತಂಕದಿಂದ ಜನರು ಕಾರ್ಡ್ಗಳನ್ನು ಪಡೆಯಲು ಮಿನಿ ವಿಧಾನಸೌಧದಲ್ಲಿರುವ ಆಹಾರ ಇಲಾಖೆ ಕಚೇರಿಗೆ ಮುಗಿಬೀಳುತ್ತಿದ್ದಾರೆ.
ತಾಲ್ಲೂಕಿನಲ್ಲಿ 47 ಸಾವಿರದಷ್ಟು ಪಡಿತರ ಕಾರ್ಡ್ಗಳಿವೆ. ಈ ಪೈಕಿ ಇ–ಕೆವೈಸಿ ಪ್ರಕ್ರಿಯೆ ಈಗಾಗಲೆ ಶೇ.60ರಷ್ಟು ಪೂರ್ಣಗೊಂಡಿದೆ. ಎರಡು, ಮೂರು ತಿಂಗಳ ಹಿಂದೆ ಇ–ಕೆವೈಸಿ ಮಾಡಿಸಿಕೊಂಡಿದ್ದವರಿಗೆ ಹೊಸದಾಗಿ ಪಡಿತರ ಚೀಟಿ ಹಂಚಿಕೆ ಮಾಡಲಾಗುತ್ತಿದ್ದು, ಇದನ್ನು ಪಡೆಯುವ ಆತುರದಲ್ಲಿ ಜನರಿದ್ದಾರೆ.
ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯ ಎದುರು ದಿನವೂ ಜನರ ಉದ್ದದ ಸಾಲು ಕಾಣಸಿಗುತ್ತಿದೆ.
‘ಕಳೆದ ಏಪ್ರಿಲ್ನಲ್ಲಿ ಲಾಕ್ಡೌನ್ ಜಾರಿಗೆ ಮುನ್ನ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಹೊಸ ಕಾರ್ಡ್ ಸಿಗಬಹುದೆಂಬ ರೀಕ್ಷೆಯಲ್ಲೇ ಮೂರು ತಿಂಗಳು ಮುಗಿದಿದೆ. ಮತ್ತೆ ಲಾಕ್ಡೌನ್ ಜಾರಿಯಾಗಬಹುದು ಎಂಬ ಆತಂಕವಿರುವ ಕಾರಣ ಹೊಸ ಕಾರ್ಡು ಪಡೆಯಲು ಬಂದಿದ್ದೇನೆ’ ಎಂದು ಗ್ರಾಹಕ ಪರಮೇಶ್ವರ ಮಡಿವಾಳ ಹೇಳಿದರು.
‘ಒನ್ ನೇಶನ್–ಒನ್ ಕಾರ್ಡ್ ಅಡಿ ಹೊಸ ಕಾರ್ಡ್ಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡವರಿಗಷ್ಟೆ ಇದು ಲಭಿಸುತ್ತಿದೆ. ಕಾರ್ಡ್ಗಳನ್ನು ಪಡೆಯಲು ಜನರು ಗುಂಪಾಗಿ ಬರುವ ಅಗತ್ಯವಿಲ್ಲ. ಈ ಬಗ್ಗೆ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ’ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ ಪ್ರತಿಕ್ರಿಯಿಸಿದರು.