ಹೊನ್ನಾವರ: ಪ್ರೇಕ್ಷಕರಿಗೆ ಹೊಸತನವನ್ನು ನೀಡುವ ಅಗತ್ಯ ಇದೆಯಾದರೂ ಕಲಾವಿದ ಯಕ್ಷಗಾನದ ಪರಂಪರೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಯಕ್ಷಗಾನದ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ ಅಭಿಪ್ರಾಯಪಟ್ಟರು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ವತಿಯಿಂದ ಗುಣವಂತೆಯ ಯಕ್ಷಾಂಗಣದಲ್ಲಿ ಭಾನುವಾರ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಾಂಪ್ರದಾಯಿಕ ಭಜನೆಯಿಂದ ಕಲಾ ಯಾತ್ರೆ ಆರಂಭವಾಯಿತು. ಕೆರೆಮನೆ ಮೇಳ ನನ್ನ ಯಕ್ಷಗಾನ ಭಾಗವತಿಗೆ ಒಂದು ನಿರ್ದಿಷ್ಟ ಆಯಾಮವನ್ನು ಒದಗಿಸಿತು ಎಂದು ಅವರು ಸ್ಮರಿಸಿದರು.
ಸಾಹಿತಿಗಳಾದ ಎಲ್.ಆರ್.ಭಟ್ಟ, ಸುಮುಖಾನಂದ ಜಲವಳ್ಳಿ, ಯಕ್ಷಗಾನ ಸಂಶೋಧಕ ಪಾದೇಕಲ್ಲು ವಿಷ್ಣು ಭಟ್ಟ, ಮದ್ದಲೆ ವಾದಕ ಮಂಜುನಾಥ ಭಟ್ಟ ಅವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ನೀಡಲಾಯಿತು.
ಫೋಕ್ ಲ್ಯಾಂಡ್ ಅಧ್ಯಕ್ಷ ಡಾ.ವಿ. ಜಯರಾಜನ್, ನಾರಾಯಣ ಯಾಜಿ ಮಾತನಾಡಿದರು. ನಾಟ್ಯೋತ್ಸವ ಸಮಿತಿಯ ಕಾಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಉಪಸ್ಥಿತರಿದ್ದರು.