ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ನದಿ ಹಿನ್ನೀರಿನಲ್ಲಿ ಎರಡು ದಿನ: ವೃದ್ಧನ ಜೀವ ಉಳಿಸಿದ ಕಾಂಡ್ಲಾ ಗಿಡ

Last Updated 20 ಮೇ 2021, 15:27 IST
ಅಕ್ಷರ ಗಾತ್ರ

ಕಾರವಾರ: ತಾವು ಸಾಕಿದ ಕೋಣಗಳನ್ನು ಹುಡುಕುತ್ತ ಹೋಗಿ ಕಾಳಿ ನದಿಯ ಹಿನ್ನೀರಿಗೆ ಬಿದ್ದ ಹಿರಿಯ ವ್ಯಕ್ತಿಯೊಬ್ಬರು, ಕೈಗೆ ಸಿಕ್ಕಿದ ಕಾಂಡ್ಲಾ ಗಿಡವನ್ನು ಎರಡು ದಿನ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ.

ತಾಲ್ಲೂಕಿನ ಹಣಕೋಣ ಗ್ರಾಮದ ಅಂಬಿಗವಾಡದ ನಿವಾಸಿ ವೆಂಕಟರಾಯ ಕೊಠಾರಕರ್ (74) ಪವಾಡ ಸದೃಶರಾಗಿ ಬದುಕಿ ಬಂದವರು. ಮೇ 16ರಂದು ತೌತೆ ಚಂಡಮಾರುತದಿಂದಾಗಿ ಭಾರಿ ಗಾಳಿಯೊಂದಿಗೆ ಮಳೆ ಬೀಳುತ್ತಿತ್ತು. ಇದರಿಂದ ಕಾಳಿ ನದಿಯ ಮಟ್ಟ ಎಂದಿಗಿಂತ ಹೆಚ್ಚಾಗಿತ್ತು. ನದಿಯ ದಡದ ಸಮೀಪದಲ್ಲಿರುವ ಖಾಲಿ ಜಮೀನಿನಲ್ಲಿ ನೀರು ತುಂಬಿಕೊಂಡಿತ್ತು.

ಮೇಯಲು ಬಿಟ್ಟಿದ್ದ ಕೋಣಗಳು ಎಲ್ಲಿ ಹೋದವೆಂದು ಹುಡುಕುತ್ತ ಹೊರಟಿದ್ದ ವೆಂಕಟರಾಯ, ಹಿನ್ನೀರಿನತ್ತ ಸಾಗಿದ್ದರು. ನೀರಿನ ಪ್ರಮಾಣವನ್ನು ಅರಿಯದೇ ಕಾಲಿಟ್ಟಾಗ ಕೊಚ್ಚಿಕೊಂಡು ಹೋಗುವ ಅಪಾಯಕ್ಕೆ ಸಿಲುಕಿದರು. ತಕ್ಷಣ ಸಾವರಿಸಿಕೊಂಡ ಅವರು, ಸಮೀಪದಲ್ಲೇ ಇದ್ದ ಕಾಂಡ್ಲಾ ಗಿಡವನ್ನು ಗಟ್ಟಿಯಾಗಿ ಹಿಡಿದುಕೊಂಡರು. ವೇಗವಾಗಿ ಬೀಸುತ್ತಿದ್ದ ಚಂಡಮಾರುತ ಮತ್ತು ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ಅವರು ಹಗಲು ರಾತ್ರಿಗಳನ್ನು ಕಳೆದರು.

ಸಂಜೆಯಾದರೂ ತಂದೆ ಮನೆಗೆ ಬಾರದೇ ಆತಂಕಗೊಂಡಿದ್ದ ಮಗ ಹುಡುಕಾಟ ಶುರು ಮಾಡಿದ್ದರು. ಮೊದಲ ದಿನ ತಂದೆ ಸಿಗಲಿಲ್ಲ. ಎರಡನೇ ದಿನ ಊರಿನ ಜನರೊಂದಿಗೆ ಸೇರಿ ನದಿ ತೀರದಲ್ಲಿ ಹುಡುಕಾಡಿದರು. ಮೇ 18ರಂದು ಸಂಜೆ ಅವರಿಗೆ ತಂದೆ ನೀರಿನ ಮಧ್ಯೆ ಇರುವುದು ಕಂಡುಬಂತು. ಬಳಿಕ ಅವರನ್ನು ರಕ್ಷಿಸಿ, ಮನೆಗೆ ಕರೆದುಕೊಂಡು ಬಂದರು. ಕೊನೆಗೂ ಹಿರಿಯ ಜೀವ ಸುರಕ್ಷಿತವಾಗಿ ಮರಳಿದ್ದು ಕುಟುಂಬ ಮತ್ತು ಊರಿನ ಮಂದಿ ನಿಟ್ಟುಸಿರು ಬಿಡುವಂತಾಯಿತು. ನೀರಿನಲ್ಲಿದ್ದ ಕಾರಣ ವೆಂಕಟರಾಯ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT