ಮುಂಡಗೋಡ:‘ಬಿಜೆಪಿಯಲ್ಲಿ ಹಳಬರು, ಹೊಸಬರು ಎಂಬ ಬೇಧ ಭಾವ ಬೇಡ. ಹಿಂದೆ ನಾನೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆಗಿದ್ದೆ’ ಎಂದು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನಪಾಳಾ ಗ್ರಾಮದ ಕಾರ್ಯಕರ್ತರ ಮನೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ನಾನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದಾಗ ವಿ.ಎಸ್.ಪಾಟೀಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೆ. ಈಗ ಇತಿಹಾಸದ ಬಗ್ಗೆ ಯೋಚನೆ ಮಾಡುವ ಬದಲು, ಭವಿಷ್ಯದ ಹೊಸ ಗೆಲುವಿಗಾಗಿ ದುಡಿಯೋಣ. ಇನ್ನೂ ಮೂರುವರೆ ವರ್ಷ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇವೇಳೆ, ಅವರು ತಾಲ್ಲೂಕಿನ ಕೋಡಂಬಿ ಹಾಗೂ ಪಾಳಾ ಗ್ರಾಮದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿಸದಸ್ಯ ಎಲ್.ಟಿ.ಪಾಟೀಲ ಸಹ ಪಾಲ್ಗೊಂಡಿದ್ದರು. ಕೋಡಂಬಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.